ADVERTISEMENT

ಮಾಟ ಮಾಡಿಲ್ಲ ಎಂದು ಸಾಬೀತುಪಡಿಸಲು ಬಿಸಿ ಕಲ್ಲಿದ್ದಲ ಮೇಲೆ ನಡೆದ ಮಹಿಳೆ

ಪಿಟಿಐ
Published 25 ಮಾರ್ಚ್ 2023, 14:19 IST
Last Updated 25 ಮಾರ್ಚ್ 2023, 14:19 IST
ಕಲ್ಲಿದ್ದಲು (ಸಂಗ್ರಹ ಚಿತ್ರ)
ಕಲ್ಲಿದ್ದಲು (ಸಂಗ್ರಹ ಚಿತ್ರ)   

ದುರ್ಗ್, ಛತ್ತೀಸಗಢ: ವಾಮಾಚಾರ ಮಾಡಿಲ್ಲ ಎಂಬುದನ್ನು ಸಾಬೀತುಪಡಿಸಲು ಮಹಿಳೆಯೊಬ್ಬಳಿಗೆ ಆಕೆಯ ಪತಿಯ ಸಂಬಂಧಿಕರು ಸುಡುತ್ತಿರುವ ಕಲ್ಲಿದ್ದಲು ಹಾಗೂ ಕಬ್ಬಿಣದ ಮೊಳೆಗಳ ಮೇಲೆ ನಡೆಯುವಂತೆ ಮಾಡಿದ ಘಟನೆ ಛತ್ತೀಸಗಢದ ದುರ್ಗ್ ಪಟ್ಟಣದಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ದುರ್ಗ್ ಪಟ್ಟಣದ ಕೈಲಾಶ್ ನಗರದಲ್ಲಿ ಮಾರ್ಚ್ 20ರಂದು ಈ ಘಟನೆ ನಡೆದಿದ್ದು, ಮಮತಾ ನಿಷಾದ್ ಎಂಬ ಮಹಿಳೆಯ ಕಾಲುಗಳು ಸುಟ್ಟು ಹೋಗಿದ್ದು, ಚಿಕಿತ್ಸೆಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಘಟನೆ ಸಂಬಂಧ ಇಬ್ಬರು ಮಹಿಳೆಯರು, ಒಬ್ಬ ಪುರುಷನನ್ನು ಬಂಧಿಸಲಾಗಿದ್ದು, ತಾಂತ್ರಿಕನೆಂದು ಹೇಳಿಕೊಂಡ ಬಾಲಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

‘ನಾನು ವಾಮಾಚಾರದಲ್ಲಿ ತೊಡಗಿದ್ದೇನೆ ಎಂದು ಶಂಕಿಸಿ ಪತಿಯ ತಮ್ಮ ಮತ್ತು ಆತನ ಹೆಂಡತಿ ಹಾಗೂ ನಾದಿನಿ ನನಗೆ ಕಿರುಕುಳ ನೀಡುತ್ತಿದ್ದರು. ಮಾರ್ಚ್ 20ರಂದು ನನ್ನ ಪತಿಯು ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಮೂವರೂ ನನ್ನನ್ನು ಕೈಲಾಶ್‌ ನಗರದ ತಾಂತ್ರಿಕರೊಬ್ಬರ ಬಳಿಗೆ ಕರೆದೊಯ್ದು, ವಾಮಾಚಾರ ಮಾಡುತ್ತಿಲ್ಲ ಎಂಬುದನ್ನು ಸಾಬೀತುಪಡಿಸಲು ಸುಡುತ್ತಿರುವ ಕಲ್ಲಿದ್ದಲು ಹಾಗೂ ಕಬ್ಬಿಣದ ಮೊಳೆಯ ಮೇಲೆ ನಡೆಯಲು ಹೇಳಿದರು. ತಾಂತ್ರಿಕ ನನ್ನನ್ನು ಸುಡುತ್ತಿರುವ ಕಲ್ಲಿದ್ದಲ ಮೇಲೆ 12 ಬಾರಿ ಹಾಗೂ ಕಬ್ಬಿಣದ ಮೊಳೆಗಳ ಮೇಲೆ 9 ಬಾರಿ ನಡೆಯುವಂತೆ ಮಾಡಿದ’ಎಂದು ಸಂತ್ರಸ್ತೆ ಮಮತಾ ಆರೋಪಿಸಿದ್ದಾರೆ.

ಪತಿಯು ಮರಳಿದ ಬಳಿಕ ಸಂತ್ರಸ್ತೆಯು ತನ್ನನ್ನು ‘ಅಗ್ನಿಪರೀಕ್ಷೆ’ಗೊಳಪಡಿಸಿದ ಕುರಿತು ತಿಳಿಸಿದ್ದಾಳೆ. ಬಳಿಕ ಪತಿಯು ಸಮೀಪದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾನೆ.

ಘಟನೆ ಸಂಬಂಧ ಬಂಧಿತರಾಗಿದ್ದ ಮೂವರು ಆರೋಪಿಗಳಿಗೆ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತೆಯು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.