ನವದೆಹಲಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಜೋ ಬೈಡನ್ ಅವರು ಭಯದ ಬದಲು ಭರವಸೆ, ವಿಭಜನೆ ಬದಲು ಏಕತೆಗೆ ಮಹತ್ವ ನೀಡುವಂತೆ ಅಲ್ಲಿನ ಮತದಾರರಲ್ಲಿ ಕೇಳಿಕೊಂಡಿದ್ದಾರೆ. ಅದೇ ರೀತಿಯ ಪ್ರತಿಜ್ಞೆಯನ್ನು ಕೇವಲ ಮಧ್ಯಪ್ರದೇಶ, ಬಿಹಾರದ ಮತದಾರರು ಮಾತ್ರವಲ್ಲದೇ ದೇಶದ ಇತರ ಜನರು ಕೂಡ ಸ್ವೀಕರಿಸಬೇಕು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಪಿ.ಚಿದಂಬರಂ ಅವರು ಹೇಳಿದರು.
‘ನಾವು ಭಯದ ಬದಲು ಭರವಸೆ, ವಿಭಜನೆಯ ಬದಲು ಏಕತೆ, ಕಾಲ್ಪಕನಿಕತೆ ಬದಲು ವಿಜ್ಞಾನ, ಸುಳ್ಳಿನ ಬದಲು ಸತ್ಯವನ್ನು ಆರಿಸುತ್ತೇವೆ’ ಎಂದು ಜೋ ಬೈಡನ್ ಅವರು ಶನಿವಾರ ಹೇಳಿದ್ದರು. ಇದು ಉತ್ತಮ ಪ್ರತಿಜ್ಞೆಯಾಗಿದೆ. ಇಂತಹ ಪ್ರತಿಜ್ಞೆಯನ್ನು ಬಿಹಾರ, ಮಧ್ಯಪ್ರದೇಶದ ಮತದಾರರು ಮಾತ್ರವಲ್ಲದೇ ಇತರ ರಾಜ್ಯದ ಜನರು ತೆಗೆದುಕೊಳ್ಳಬೇಕು’ ಎಂದು ಚಿದಂಬರಂ ಅವರು ಸರಣಿ ಟ್ವೀಟ್ ಮಾಡಿದ್ದಾರೆ.
‘ನ್ಯೂಜಿಲ್ಯಾಂಡ್ನ ಪ್ರಧಾನಿಯಾಗಿ ಜೆಸಿಂದಾ ಅರ್ಡನ್ ಅವರು ಆಯ್ಕೆಯಾಗಿದ್ದಾರೆ. ಇದರಿಂದ ಪ್ರಜಾಪ್ರಭುತ್ವದಲ್ಲಿ ಸಭ್ಯತೆ, ಪ್ರಗತಿಪರ ಮೌಲ್ಯಗಳಿಂದಲೂ ಚುನಾವಣೆಯನ್ನು ಗೆಲ್ಲಬಹುದು ಎಂಬ ಭರವಸೆ ಮೂಡಿದೆ’ ಎಂದು ಅವರು ಹೇಳಿದರು.
ಮೂರು ಹಂತಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯು ಅ.28ರಿಂದ ಆರಂಭಗೊಳ್ಳಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.