ADVERTISEMENT

ಮಕ್ಕಳ ಕಳ್ಳರ ಜಾಲದ ಮತ್ತೊಬ್ಬ ಆರೋಪಿ ಸೆರೆ

ಪಿಟಿಐ
Published 3 ಏಪ್ರಿಲ್ 2019, 20:11 IST
Last Updated 3 ಏಪ್ರಿಲ್ 2019, 20:11 IST
   

ಥಾಣೆ: ಮಕ್ಕಳ ಅಪಹರಣ ನಡೆಸುತ್ತಿದ್ದ ಜಾಲವನ್ನು ಬೇಧಿಸಿರುವ ಪೊಲೀಸರು ಮಂಗಳವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.

ರಿಕ್ಷಾ ಚಾಲಕ ಮಹಮದ್‌ ಅಜರುದ್ದೀನ್‌ನನ್ನು ಮುಂಬ್ರಾ ಪಟ್ಟಣದಲ್ಲಿ ಬಂಧಿಸಲಾಗಿದೆ ಎಂದು ವಲಯ –1ರ ಪೊಲೀಸ್‌ ಉಪ ಆಯುಕ್ತ ಎಸ್‌.ಎಸ್‌. ಬುರ್ಸೆ ಹೇಳಿದರು.

ಅಜರುದ್ದೀನ್‌ ಅಪಹೃತ ಮಕ್ಕಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ನೆರವಾಗುತ್ತಿದ್ದ. ಇದೇ ಪ್ರದೇಶದಿಂದ ನಾಲ್ಕು ಮಂದಿಯನ್ನು ಬಂಧಿಸಲಾಗಿತ್ತು.

ADVERTISEMENT

ಈ ತಂಡವು ಕಳೆದ ಕೆಲವು ತಿಂಗಳಿಂದ ಬೇರೆ ಬೇರೆ ಸ್ಥಳಗಳಿಂದ ಕನಿಷ್ಠ 8ರಿಂದ 10 ಮಕ್ಕಳನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ದಹಿಸರ್‌ನಲ್ಲಿ ಮಾರ್ಚ್ 31ರಂದು ಅಪಹರಣಗೊಂಡ ಬಾಲಕ ಅಹಮದ್‌ ಜಮಾಲ್‌ ಅಹಮದ್‌ ಷಾನನ್ನು ಪತ್ತೆಹಚ್ಚಿದ ಬಳಿಕ ಈ ಜಾಲವನ್ನು ಪೊಲೀಸರು ಭೇದಿಸಿದ್ದರು. ಬಾಲಕನನ್ನು ಮುಂಬ್ರಾದ ಮನೆಯಲ್ಲಿ ಇರಿಸಲಾಗಿತ್ತು. ಬಾಲಕನ ತಾಯಿ ನೀರು ತರಲು ಮನೆಯಿಂದ ಹೊರ ಹೋದಾಗ ಅವನನ್ನು ಅಪಹರಿಸಲಾಗಿತ್ತು.

ಆ ವೇಳೆ ಅಫ್ರಿನ್‌ ಖಾನ್‌, ಮುನಿಬಾ ಷಾ, ಅಜಿಂ ದಿವೇಕರ್ ಮತ್ತು ಆತನ ಪತ್ನಿ ಅಮಿರಾ ದಿವೇಕರ್‌ನ್ನು ಬಂಧಿಸಲಾಗಿತ್ತು.

‘ವಿಚಾರಣೆ ವೇಳೆ ಅಫ್ರಿನ್‌ ಖಾನ್‌ ಪದೇ ಪದೇ ಹೇಳಿಕೆಗಳನ್ನು ಬದಲಿಸುತ್ತಿದ್ದಾಳೆ. ಅವಳೇ ಹೆಳುವ ಪ್ರಕಾರ ಕನಿಷ್ಠ ಅರ್ಧ ಡಜನ್‌ನಷ್ಟು ಮಕ್ಕಳನ್ನು ಅಪಹರಿಸಲಾಗಿದೆ. ಬಳಿಕ ಅವರನ್ನು ಕೊಂದು ಹೂತು ಹಾಕಿದ್ದೇವೆ ಎನ್ನುತ್ತಿದ್ದಾಳೆ. ಅವಳು ಹೇಳಿದ ಸ್ಥಳಗಳಲ್ಲಿ ಅಗೆದು ನೋಡಿದ್ದೇವೆ ಆದರೆ, ಏನೂ ಸಿಕ್ಕಿಲ್ಲ’ ಎಂದು ಶಿಲ್‌ ದಾಯ್‌ಘರ್‌ ಪೊಲೀಸರು ತಿಳಿಸಿದ್ದಾರೆ.

‘ಕೆಲವು ಮಕ್ಕಳನ್ನು ವಿದೇಶಕ್ಕೂ ಕಳುಹಿಸಿದ್ದೇನೆ ಎನ್ನುತ್ತಿದ್ದಾಳೆ. ಆದರೆ ಅದನ್ನು ಇನ್ನಷ್ಟೇ ಪರಿಶೀಲಿಸಬೇಕಿದೆ. ಮಕ್ಕಳನ್ನು ಮಾರಾಟ ಮಾಡಿದ್ದರೆ ಅವರನ್ನು ಕೊಂಡ ವ್ಯಕ್ತಿಗಳನ್ನೂ ಪತ್ತೆಹಚ್ಚಬೇಕಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.