ADVERTISEMENT

ಮಕ್ಕಳ ಕಳ್ಳಸಾಗಣೆ: ತನಿಖಾ ತಂಡ ರಚಿಸಲು ಹೈಕೋರ್ಟ್‌ ಸೂಚನೆ

ಮಕ್ಕಳ ಕಳ್ಳಸಾಗಣೆ ಹಾಗೂ ಲೈಂಗಿಕ ಕಿರುಕುಳ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 18:54 IST
Last Updated 22 ಅಕ್ಟೋಬರ್ 2018, 18:54 IST
   

ಹೈದರಾಬಾದ್‌: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಅವರ ಕಳ್ಳಸಾಗಣೆ ಪ್ರಕರಣದ ತನಿಖೆಗೆ ವಿಶೇಷ ತಂಡ ಹಾಗೂ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಬೇಕು ಎಂದು ಹೈಕೋರ್ಟ್‌ ತೆಲಂಗಾಣ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಮುಖ್ಯನ್ಯಾಯಮೂರ್ತಿ ಟಿ.ಬಿ. ರಾಧಾಕೃಷ್ಣನ್‌ ಮತ್ತು ನ್ಯಾಯಮೂರ್ತಿ ಎಸ್.ವಿ. ಭಟ್‌ ಅವರನ್ನೊಳಗೊಂಡ ಪೀಠ, ಸ್ವಯಂಪ್ರೇರಿತವಾಗಿ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸರ್ಕಾರಕ್ಕೆ ಸೂಚನೆ ನೀಡಿದೆ.

ಯಾದಾದ್ರಿ ಜಿಲ್ಲೆ ಮತ್ತು ರಾಜ್ಯದ ಇತರೆಡೆ ಮಕ್ಕಳಿಗೆ ಹಾರ್ಮೋನ್‌ ಇಂಜೆಕ್ಷನ್‌ ನೀಡಿ ಅವರ ಮೇಲೆಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ರಾಜ್ಯದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

ADVERTISEMENT

ತೆಲಂಗಾಣ ಸರ್ಕಾರದ ಅಡ್ವೋಕೇಟ್‌ ಜನರಲ್‌ ಅವರಿಂದ ಈ ಕುರಿತು ವಿವರಣೆ ಕೇಳಿರುವ ಪೀಠ, ರಾಜ್ಯದಲ್ಲಿರುವ ಮಹಿಳಾ ಪೊಲೀಸ್‌ ಅಧಿಕಾರಿಗಳ ಪಟ್ಟಿ ನೀಡುವಂತೆ ಕೋರಿದ್ದು, ಅವರಲ್ಲಿ ಒಬ್ಬರನ್ನು ತನಿಖಾ ತಂಡದ ಮುಖ್ಯಸ್ಥರನ್ನಾಗಿ ನೇಮಿಸುವುದಾಗಿ ಹೇಳಿದೆ.

‘ದೇಗುಲಗಳ ನಗರಿ' ಎಂದು ಖ್ಯಾತವಾಗಿರುವ ಯಾದಾದ್ರಿಯಲ್ಲಿ ಮಕ್ಕಳ ಕಳ್ಳಸಾಗಣೆ ಕುರಿತು ಪೊಲೀಸ್‌ ಗುಪ್ತಚರ ವಿಭಾಗಕ್ಕೆ ಮಾಹಿತಿ ಇರಲಿಲ್ಲವೇ ಎಂದು ನ್ಯಾಯಮೂರ್ತಿ ಭಟ್‌ ಪ್ರಶ್ನಿಸಿದ್ದಾರೆ.

ಮಕ್ಕಳಿಗೆ ಹಾರ್ಮೋನ್‌ಗಳು ಇದ್ದಕ್ಕಿದ್ದಂತೆ ಹೆಚ್ಚುವ ಇಂಜೆಕ್ಷನ್‌ ನೀಡಿದ ವೈದ್ಯ (ಆರ್‌ಎಂಪಿ) ಜಾಮೀನು ನೀಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯನ್ಯಾಯಮೂರ್ತಿ, ‘ನಾವು ತಪ್ಪಿತಸ್ಥರನ್ನು ಹಿಡಿಯುತ್ತೇವೆ ಮತ್ತು ಅವರನ್ನು ಶಿಕ್ಷಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.

‘ಮಕ್ಕಳನ್ನು ಫಾರಂ ಕೋಳಿಗಳಿಂತೆ ಆರ್‌ಎಂಪಿ ನಡೆಸಿಕೊಂಡಿದ್ದಾನೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಯಾದಾದ್ರಿ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಮಂಗಳವಾರ ನ್ಯಾಯಾಲಯದ ಎದುರು ಹಾಜರಾಗಲು ಸೂಚಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.