ನವದೆಹಲಿ: ಚೀನಾ ಜೊತೆಗಿನ ಮೂಲಭೂತ ಗಡಿ ಸಮಸ್ಯೆಯು ಪ್ರಶ್ನೆಯಾಗಿಯೇ ಉಳಿದಿದೆ. ಬೀಜಿಂಗ್ನ ಉದ್ದೇಶವು ಅದನ್ನು ‘ಜೀವಂತವಾಗಿ’ಇಡುವುದೇ ಆಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಸೋಮವಾರ ಹೇಳಿದ್ದಾರೆ, ಗಡಿಯಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಪಡೆಗಳನ್ನು ಸಮರ್ಪಕವಾಗಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 2020ಕ್ಕಿಂತ ಮೊದಲು ಇದ್ದಂತೆ ಯಥಾಸ್ಥಿತಿ ಪುನಃಸ್ಥಾಪಿಸುವುದೇ ಸೇನೆಯ ಗುರಿಯಾಗಿದ್ದು, ಗಡಿಯಲ್ಲಿ ನಿಯೋಜಿಸಲಾಗಿರುವ ಸೇನಾ ಪಡೆಗಳಿಗೆ ತಮ್ಮ ಕೆಲಸದಲ್ಲಿ ದೃಢವಾಗಿ ಉಳಿಯಲು ಸೂಚಿಸಲಾಗಿದೆ ಎಂದು ಜನರಲ್ ಪಾಂಡೆ ಹೇಳಿದರು.
ಭಾರತೀಯ ಪಡೆಗಳು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಪ್ರಮುಖ ಸ್ಥಾನಗಳನ್ನು ಹಿಡಿದಿಟ್ಟುಕೊಳ್ಳುವುದನ್ನು ಮುಂದುವರೆಸಿವೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸೇನೆಯು ದೃಢ ನಿಲುವು ಹೊಂದಿದೆ ಎಂದು ಪತ್ರಕರ್ತರಿಗೆ ತಿಳಿಸಿದರು.
‘ಮೂಲಭೂತ ಗಡಿ ಸಮಸ್ಯೆಯು ಹಾಗೆಯೇ ಉಳಿದಿದೆ. ಗಡಿ ಸಮಸ್ಯೆಯನ್ನು ಜೀವಂತವಾಗಿರಿಸುವುದು ಚೀನಾದ ಉದ್ದೇಶವಾಗಿದೆ’ಎಂದು ಅವರು ಹೇಳಿದರು.
ವಾರದ ಹಿಂದೆ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಜನರಲ್ ಪಾಂಡೆ, ಎರಡೂ ಸೇನೆಗಳ ನಡುವಿನ ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳ ಫಲವಾಗಿ ಉತ್ತರ ಮತ್ತು ದಕ್ಷಿಣ ದಂಡೆಗಳಾದ ಪ್ಯಾಂಗಾಂಗ್ ತ್ಸೊ, ಗೊಗ್ರಾ ಮತ್ತು ಗಾಲ್ವಾನ್ನ ಗಸ್ತು ಪ್ರದೇಶಗಳಲ್ಲಿ ಸೇನಾ ಜಮಾವಣೆ ಹಿಂಪಡೆಯಲಾಗಿದೆ. ಉಳಿದ ಪ್ರದೇಶಗಳಲ್ಲೂ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
‘ನಮ್ಮ ಗುರಿ ಏಪ್ರಿಲ್ 2020ಕ್ಕಿಂತ ಮೊದಲು ಇದ್ದಂತೆ ಯಥಾಸ್ಥಿತಿ ಪುನಃಸ್ಥಾಪಿಸುವುದೇ ಆಗಿದೆ’ಎಂದು ಅವರು ಪುನರುಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.