ADVERTISEMENT

ಗಡಿಯಲ್ಲಿ ಅನಿರೀಕ್ಷಿತ ಪರಿಸ್ಥಿತಿ ಎದುರಿಸುತ್ತಿರುವ ಚೀನಾ: ಬಿಪಿನ್ ರಾವತ್‌

ಸೇನಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್‌

ಪಿಟಿಐ
Published 6 ನವೆಂಬರ್ 2020, 15:26 IST
Last Updated 6 ನವೆಂಬರ್ 2020, 15:26 IST
ಬಿಪಿನ್ ರಾವತ್‌
ಬಿಪಿನ್ ರಾವತ್‌   

ನವದೆಹಲಿ: ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ(ಎಲ್‌ಎಸಿ) ಚೀನಾ ನಡೆಸಿದ ಅತಿಕ್ರಮಣಕ್ಕೆ ಭಾರತವು ನೀಡಿದ ‘ಸ್ಥಿರ ಹಾಗೂ ಬಲವಾದ’ ಪ್ರತಿಕ್ರಿಯೆಗೆ ‘ಅನಿರೀಕ್ಷಿತ ಪರಿಣಾಮ’ವನ್ನು ಚೀನಾ ಸೇನೆಯು ಎದುರಿಸುತ್ತಿದೆ. ಗಡಿಯಲ್ಲಿನ ಅತಿಕ್ರಮಣ ಹಾಗೂ ಮುಖಾಮುಖಿಯು ಮುಂದುವರಿದು ಯುದ್ಧಕ್ಕೆ ಕಾರಣವಾದೀತು ಎನ್ನುವುದನ್ನು ತಳ್ಳಿಹಾಕುವಂತಿಲ್ಲ ಎಂದು ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಶುಕ್ರವಾರ ಹೇಳಿದರು.

ಆನ್‌ಲೈನ್‌ ಮೂಲಕ ನಡೆಸ ಸಂಕಿರಣವೊಂದರಲ್ಲಿ ಮಾತನಾಡಿದ ರಾವತ್‌, ‘ಪೂರ್ವ ಲಡಾಖ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಭಾರತವು ಎಲ್‌ಎಸಿ ಬದಲಾವಣೆಯನ್ನು ಒಪ್ಪುವುದಿಲ್ಲ. ಈ ವಿಚಾರದಲ್ಲಿ ನಿಲುವು ಸ್ಪಷ್ಟವಾಗಿದೆ’ ಎಂದರು.

‘ಪಾಕಿಸ್ತಾನ ಹಾಗೂ ಚೀನಾದ ಅತಿಕ್ರಮಣವು ಭಾರತದ ಪ್ರಾದೇಶಿಕ ಸಮಗ್ರತೆ ಹಾಗೂ ಭೌಗೋಳಿಕ ಸಮಗ್ರತೆಗೆ ಅಪಾಯ ತಂದೊಡ್ಡುತ್ತಿದೆ. ಎಲ್‌ಎಸಿಯಲ್ಲಿ ಚೀನಾ ನಡೆಸಿದ ದುಷ್ಕೃತ್ಯಕ್ಕೆ ಭಾರತದ ಸೇನಾಪಡೆಗಳು ನೀಡಿದ ತಕ್ಕಪ್ರತ್ಯು
ತ್ತರಕ್ಕೆ ಅನಿರೀಕ್ಷಿತ ಪರಿಸ್ಥಿತಿಯನ್ನು ಚೀನಾ ಎದುರಿಸುತ್ತಿದೆ. ಉರಿ ದಾಳಿ ನಂತರದಲ್ಲಿ ಭಾರತ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ ಹಾಗೂ ಬಾಲಕೋಟ್‌ ದಾಳಿಯು ‘ಗಡಿಯೊಳಗೆ ಉಗ್ರರನ್ನು ಕಳುಹಿಸುವ ದುಷ್ಕೃತ್ಯವನ್ನು ಭಾರತ ಸಹಿಸುವುದಿಲ್ಲ’ ಎನ್ನುವ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನಕ್ಕೆ ಕಳುಹಿಸಿದೆ’ ಎಂದರು.

ADVERTISEMENT

‘ಆಂತರಿಕ ಸಮಸ್ಯೆ, ಕುಸಿಯುತ್ತಿರುವ ಆರ್ಥಿಕತೆ, ಸೇನೆಯೊಳಗಿನ ಹಳಸಿದ ಸಂಬಂಧ, ಅಂತರರಾಷ್ಟ್ರೀಯ ಸಂಬಂಧಗಳ ಕಡಿತದ ಹೊರತಾಗಿಯೂ, ಕಾಶ್ಮೀರವು ನಮ್ಮ ಭಾಗ ಎಂದು ಪಾಕಿಸ್ತಾನವು ಪ್ರತಿಪಾದಿಸಲಿದೆ. ಪಾಕಿಸ್ತಾನವು ಶಸ್ತ್ರಸಜ್ಜಿತ ಮುಸ್ಲಿಂ ತೀವ್ರವಾದಿ ಹಾಗೂ ಉಗ್ರರ ನೆಲೆಯಾಗಿದೆ. ಪಾಕಿಸ್ತಾನ ಸೇನೆ ಹಾಗೂ ಐಎಸ್‌ಐ ಸೇರಿಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ, ಸಾಮಾಜಿಕ ಜಾಲತಾಣಗಳನ್ನು ಯುದ್ಧದ ಅಸ್ತ್ರ ವಾಗಿ ಬಳಸಿಕೊಂಡು ಸಾಮಾಜಿಕ ಸಾಮರಸ್ಯವನ್ನು ಕದಡುತ್ತಿದೆ’ ಎಂದು ರಾವತ್ ಹೇಳಿದರು.

ಗಡಿ ಬಿಕ್ಕಟ್ಟು: 8ನೇ ಸುತ್ತಿನ ಮಾತುಕತೆ

ನವದೆಹಲಿ:ಪೂರ್ವ ಲಡಾಖ್‌ ಗಡಿಯಲ್ಲಿ ಘರ್ಷಣೆ ಸಂಭವಿಸಿದ ಎಲ್ಲ ಪ್ರದೇಶಗಳಿಂದ ಚೀನಾ ಮತ್ತು ಭಾರತದ ಸೈನಿಕರು ಹಿಂದೆಸರಿಯುವುದಕ್ಕೆ ಮಾರ್ಗಸೂಚಿಯನ್ನು ರಚಿಸುವ ಉದ್ದೇಶದೊಂದಿಗೆ, ಭಾರತ–ಚೀನಾ ಸೇನೆಯ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಎಂಟನೇ ಸುತ್ತಿನ ಮಾತುಕತೆ ಶುಕ್ರವಾರ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ(ಎಲ್‌ಎಸಿ) ಚುಶೂಲ್‌ ಪ್ರದೇಶದಲ್ಲಿ ಬೆಳಗ್ಗೆ 9.30ರಿಂದ ಉನ್ನತ ಮಟ್ಟದ ಮಾತುಕತೆ ನಡೆಯಿತು. ಲೇಹ್‌ನಲ್ಲಿ ನಿಯೋಜನೆಗೊಂಡಿರುವ 14 ಕಾರ್ಪ್ಸ್‌ನ ನೂತನ ಕಮಾಂಡರ್‌ ಲೆ.ಜನರಲ್‌ ಪಿಜಿಕೆ ಮೆನನ್‌ ನೇತೃತ್ವದ ಭಾರತದ ನಿಯೋಗವು ಸಭೆಯಲ್ಲಿ ಭಾಗವಹಿಸಿತು.

ಅ.12ರಂದು ಎರಡೂ ದೇಶದ ಸೇನಾ ಅಧಿಕಾರಿಗಳ ಏಳನೇ ಸುತ್ತಿನ ಮಾತುಕತೆ ನಡೆದಿತ್ತು. ಈ ಸಭೆಯಲ್ಲಿ ಪ್ಯಾಂಗಾಂಗ್‌ ಸರೋವರದ ಸುತ್ತಮುತ್ತಲಿರುವ ಪ್ರಮುಖ ಪರ್ವತ ಪ್ರದೇಶಗಳಿಂದ ಭಾರತದ ಸೈನಿಕರು ಹಿಂದಕ್ಕೆ ಸರಿಯಬೇಕು ಎಂದು ಚೀನಾವು ಆಗ್ರಹಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಭಾರತ, ಘರ್ಷಣೆ ಸಂಭವಿಸಬಹುದಾದ ಪ್ರದೇಶಗಳಿಂದ ಎರಡೂ ದೇಶಗಳ ಸೈನಿಕರು ಏಕಕಾಲದಲ್ಲಿ ಹಿಂದೆಸರಿಯಬೇಕು ಎಂದು ಪ್ರತಿಪಾದಿಸಿತ್ತು. ಮಾತುಕತೆ ಮುಖಾಂತರವೇ ಒಮ್ಮತವಾದ ಪರಿಹಾರ ಕಂಡುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.