ADVERTISEMENT

ಚೀನಾ ಅತಿಕ್ರಮಣಕ್ಕೆ ತಿರುಗೇಟು ನೀಡಿದ ಭಾರತ

ಅರುಣಾಚಲ ಪ್ರದೇಶದ ತವಾಂಗ್ ಬಳಿ ಸಂಘರ್ಷ

ಪಿಟಿಐ
Published 8 ಅಕ್ಟೋಬರ್ 2021, 21:41 IST
Last Updated 8 ಅಕ್ಟೋಬರ್ 2021, 21:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಭಾರತ ಮತ್ತು ಚೀನಾ ಸೈನಿಕರು ಅರುಣಾಚಲ ಪ್ರದೇಶದ ತವಾಂಗ್ ಬಳಿಯ ಯೆಂಗ್‌ಟ್ಸೆ ಎಂಬಲ್ಲಿ ಮುಖಾಮುಖಿಯಾಗಿದ್ದಾರೆ. ಚೀನಾ ಸೈನಿಕರು ಭಾರತದ ಗಡಿಯನ್ನು ಅತಿಕ್ರಮಿಸುವುದನ್ನು ತಡೆಯಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದೆ, ಎರಡೂ ಕಡೆಯ ಸೈನಿಕರು ತಮ್ಮ ಸ್ಥಾನಗಳಿಗೆ ಮರಳಿದ್ದಾರೆ ಎಂದು ಮೂಲಗಳು ಹೇಳಿವೆ.

ಸೆಪ್ಟೆಂಬರ್ ಕೊನೆಯ ವಾರದಲ್ಲಿ ಈ ಘಟನೆ ನಡೆದಿದೆ. ಪೂರ್ವ ಲಡಾಖ್‌ನಲ್ಲಿನ ಸಂಘರ್ಷದ ಸಂಬಂಧ ಎರಡೂ ಕಡೆಯ ಸೇನಾಧಿಕಾರಿಗಳ ಸಭೆ ಮುಂದಿನ ವಾರ ನಡೆಯಲಿದೆ. ಆದರೆ ಅದಕ್ಕೂ ಮುನ್ನವೇ ಈ ಮುಖಾಮುಖಿ ನಡೆದಿದೆ.

‘ಯೆಂಗ್‌ಟ್ಸೆ ಪ್ರದೇಶವು ಭೂತಾನ್‌ನ ಗಡಿಗೆ ಹೊಂದಿಕೊಂಡಿರುವ ಬುಮ್‌-ಲಾ ಪಾಸ್‌ಗೆ ಹತ್ತಿರವಿದೆ. ಅಲ್ಲಿನ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಎರಡೂ ಕಡೆಯ ಸೈನಿಕರು ಗಸ್ತು ತಿರುಗುತ್ತಿರುತ್ತಾರೆ. ಹೀಗೆ ಗಸ್ತು ತಿರುಗುವಾಗ ಮುಖಾಮುಖಿ ನಡೆದಿದೆ. ಭಾರತದ ಗಡಿಯನ್ನು ಚೀನಾ ಸೈನಿಕರು ಅತಿಕ್ರಮಿಸಲು ಮುಂದಾಗಿದ್ದರು. ಆಗ ಅಲ್ಲಿಗೆ ಭಾರತದ ಸೈನಿಕರು ತೆರಳಿದ್ದಾರೆ. ಚೀನಾ ಸೈನಿಕರನ್ನು ತಡೆದಿದ್ದಾರೆ’ ಎಂದು ಮೂಲಗಳು ಹೇಳಿವೆ.

ADVERTISEMENT

‘ಮುಖಾಮುಖಿಯಾದ ನಂತರ ನಾಲ್ಕೈದು ತಾಸುಗಳವರೆಗೆ ಸಂಘರ್ಷ ನಡೆದಿದೆ. ಆದರೆ ಯಾರಿಗೂ ಗಾಯಗಳಾಗಿಲ್ಲ. ನಂತರ, ಜಾರಿಯಲ್ಲಿರುವ ಮಾರ್ಗಸೂಚಿಯ ಅನ್ವಯ ಎರಡೂ ಕಡೆಯ ಸೈನಿಕರು ವಾಪಸ್ಸಾಗಿದ್ದಾರೆ' ಎಂದು ಮೂಲಗಳು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.