ADVERTISEMENT

ಸಂವಿಧಾನದ ಪೀಠಿಕೆ ಓದಲು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಲಹೆ

ಪಿಟಿಐ
Published 26 ಜನವರಿ 2021, 13:46 IST
Last Updated 26 ಜನವರಿ 2021, 13:46 IST
ಮೋಹನ್ ಭಾಗವತ್
ಮೋಹನ್ ಭಾಗವತ್   

ಅಹಮದಾಬಾದ್: ‘ನಾಗರಿಕರು ಗಣರಾಜ್ಯೋತ್ಸವದ ದಿನ ಸಂವಿಧಾನದ ಪೀಠಿಕೆಯನ್ನು ಓದಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಮಂಗಳವಾರ ಹೇಳಿದ್ದಾರೆ.

ಇಲ್ಲಿನ ಮಣಿನಗರ ಪ್ರದೇಶದಲ್ಲಿನ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜಾರೋಹಣ ಮಾಡಿ ಮಾತನಾಡಿದ ಅವರು, ‘ಈ ದಿನ ನಾಗರಿಕರು ಸಂವಿಧಾನದ ಪೀಠಿಕೆಯನ್ನು ಓದಬೇಕು. ಏಕೆಂದರೆ ನಮ್ಮ ದೇಶವನ್ನು ನಾಗರಿಕರು ಎಲ್ಲಿಗೆ ಕೊಂಡೊಯ್ಯಬೇಕು ಎಂಬುದನ್ನು ಸಂವಿಧಾನ ಹೇಳುತ್ತದೆ’ ಎಂದರು.

‘ಧ್ವಜಾರೋಹಣ ಮಾಡುವಾಗ ಹಾಡುವ ರಾಷ್ಟ್ರಗೀತೆಯು ನಮ್ಮ ಕಣ್ಮುಂದೆ ಇಡೀ ದೇಶದ ಚಿತ್ರಣವನ್ನೇ ತೆರೆದಿಡುತ್ತದೆ’ ಎಂದು ಹೇಳಿದ ಅವರು, ರಾಷ್ಟ್ರಧ್ವಜದಲ್ಲಿನ ತ್ರಿವರ್ಣಗಳ ಮಹತ್ವವನ್ನೂ ಹೇಳಿದರು.

ADVERTISEMENT

‘ಕೇಸರಿ ಬಣ್ಣವು ಅಗ್ನಿಯಿಂದ ಪ್ರೇರಿತವಾಗಿದೆ. ಅಗ್ನಿ ಹೇಗೆ ಎಲ್ಲವನ್ನೂ ತನ್ನಲ್ಲಿ ಒಳಗೊಳ್ಳುತ್ತದೆಯೋ ಅಂತೆಯೇ ಕೇಸರಿ ಬಣ್ಣವೂ ಎಲ್ಲವನ್ನೂ ಒಳಗೊಳ್ಳುವಿಕೆಯ ಪ್ರತೀಕವಾಗಿದೆ. ಅಷ್ಟೇ ಅಲ್ಲ ಇದು ಶ್ರಮ ಮತ್ತು ತ್ಯಾಗದ ಬಣ್ಣವೂ ಆಗಿದೆ. ಬಿಳಿ ನಿಷ್ಕಳಂಕದ ಸಂಕೇತವಾದರೆ, ಹಸಿರು ಬಣ್ಣವು ಸಂಪತ್ತಿನ ದೇವತೆ ಲಕ್ಷ್ಮೀಯ ಬಣ್ಣವಾಗಿದೆ. ಇದು ನಮ್ಮ ದೇಶ ಸಮೃದ್ಧವಾಗಿರಬೇಕೆಂದು’ ಸೂಚಿಸುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.