ಕಲ್ಪ ಕೇದಾರ ದೇವಾಲಯ
ಚಿತ್ರ ಕೃಪೆ: ಎಕ್ಸ್
ಉತ್ತರಕಾಶಿ: ಮೇಘಸ್ಫೋಟದಿಂದ ಖೀರಗಂಗಾ ನದಿಯಲ್ಲಿ ಮಂಗಳವಾರ ಉಂಟಾದ ಹಠಾತ್ ಪ್ರವಾಹಕ್ಕೆ ಹಲವಾರು ಮನೆಗಳು ಕೊಚ್ಚಿಕೊಂಡು ಹೋಗಿವೆ. ಕೆಸರಿನಡಿಯಲ್ಲಿ ಇಲ್ಲಿನ ಪ್ರಾಚೀನ ಕಲ್ಪ ಕೇದಾರ ದೇವಾಲಯವು ಹೂತು ಹೋಗಿದೆ.
ಹಲವಾರು ವರ್ಷಗಳಿಂದ ನೆಲದಡಿಯಲ್ಲಿ ಹೂತು ಹೋಗಿದ್ದ ಈ ದೇವಾಲಯವು 1945ರಲ್ಲಿ ನಡೆದ ಉತ್ಖನನದಲ್ಲಿ ಪತ್ತೆಯಾಗಿತ್ತು. ಹಲವಾರು ಅಡಿ ನೆಲ ಅಗೆದ ನಂತರ ಕೇದರನಾಥ ದೇವಾಲಯವನ್ನೇ ಹೋಲುವ ಪ್ರಾಚೀನ ದೇವಾಲಯವು ಪತ್ತೆಯಾಗಿತ್ತು.
ನೆಲಮಟ್ಟಕ್ಕಿಂತ ಕೆಳಗಿರುವ ಈ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಕೆಳಗೆ ಇಳಿದು ಹೋಗಬೇಕಾಗಿತ್ತು. ಖೀರಗಂಗಾದಿಂದ ಸ್ವಲ್ಪ ನೀರು ಆಗಾಗ್ಗೆ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾದ ಶಿವಲಿಂಗದ ಮೇಲೆ ಹರಿಯುತ್ತಿತ್ತು. ದೇವಾಲಯದ ಹೊರಗೆ ಕಲ್ಲಿನ ಕೆತ್ತನೆಗಳಿವೆ.
ಕತುರೆ ಶೈಲಿಯಲ್ಲಿ ನಿರ್ಮಿಸಲಾದ ಈ ಶಿವ ದೇವಾಲಯದ ವಾಸ್ತುಶಿಲ್ಪವು ಕೇದಾರನಾಥ ಧಾಮದ ವಾಸ್ತುಶಿಲ್ಪವನ್ನು ಹೋಲುತ್ತದೆ.
ಏತನ್ಮಧ್ಯೆ, ಪ್ರವಾಹದಿಂದ ಇದುವರೆಗೆ ಐವರು ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರವಾಸಿಗರು ಸೇರಿ 100ಕ್ಕೂ ಹೆಚ್ಚು ಜನರು ಕಟ್ಟಡಗಳ ಅವಶೇಷಗಳಡಿ ಸಿಲುಕಿರಬಹುದು ಎಂದು ಮೂಲಗಳು ತಿಳಿಸಿವೆ.
20–25 ಹೋಟೆಲ್ಗಳು/ಹೋಂ ಸ್ಟೇಗಳು ಕೊಚ್ಚಿಕೊಂಡು ಹೋಗಿವೆ. ಇಂಡೊ–ಟಿಬೆಟ್ ಗಡಿ ಪೊಲೀಸ್ನ (ಐಟಿಬಿಪಿ) ಪಡೆಯ 16 ಸದಸ್ಯರಿರುವ ತಂಡ ಧಾರಾಲಿಗೆ ತೆರಳಿ ರಕ್ಷಣಾ ಕಾರ್ಯ ಕೈಗೆತ್ತಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.