ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾಡ ಜಿಲ್ಲೆಯಲ್ಲಿ ಮೇಘಸ್ಫೋಟ
(ಪಿಟಿಐ ಚಿತ್ರ)
ಶ್ರೀನಗರ: ಜಮ್ಮು–ಕಾಶ್ಮೀರದ ಕಿಶ್ತವಾಡ ಜಿಲ್ಲೆಯ ಚಸೋತಿ ಗ್ರಾಮದಲ್ಲಿ ಗುರುವಾರ ಭಾರಿ ಮೇಘಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಿಐಎಸ್ಎಫ್ ಯೋಧರು ಸೇರಿದಂತೆ 46 ಮಂದಿ ಮೃತಪಟ್ಟಿದ್ದಾರೆ. 120ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರಾಕಾರ ಮಳೆ ಸುರಿದು ಗುರುವಾರ ಮಧ್ಯಾಹ್ನ ಸುಮಾರು 12ರಿಂದ 1ರ ವೇಳೆ ಮೇಘಸ್ಫೋಟ ಸಂಭವಿಸಿದೆ. ಇದರಿಂದಾಗಿ ಮಚೈಲ್ ಮಾತಾ ಯಾತ್ರಾ ಮಾರ್ಗದಲ್ಲಿ ಹಠಾತ್ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಘಟನೆ ಯಲ್ಲಿ 200ಕ್ಕೂ ಅಧಿಕ ಮಂದಿ ನಾಪತ್ತೆ ಯಾಗಿದ್ದು, ಪ್ರವಾಹ ಸಂತ್ರಸ್ತರಿಗೆ ನೆರವು ತಲುಪಿಸು ವುದಕ್ಕೂ ರಕ್ಷಣಾ ಸಿಬ್ಬಂದಿ ಪರದಾಡುವ ಸ್ಥಿತಿ ಎದುರಾಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಳದ ಆತಂಕ: ಹಲವು ಪ್ರದೇಶಗಳು ಸಂಪೂರ್ಣ ಕಲ್ಲು, ಮಣ್ಣು, ಕೆಸರಿನ ಅವಶೇಷಗಳಿಂದ ತುಂಬಿ ಹೋಗಿದ್ದು, ಅವುಗಳ ಅಡಿಯಲ್ಲಿ ಜನರು ಸಿಲುಕಿರುವ ಸಾಧ್ಯತೆಗಳಿವೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಆತಂಕವಿದ್ದು, ಅವಶೇಷಗಳ ಅಡಿ ಯಲ್ಲಿ ಸಿಲುಕಿರುವವರನ್ನು ರಕ್ಷಿಸಲು ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ.
ಮೇಘ ಸ್ಫೋಟದಿಂದಾಗಿ ಮಚೈಲ್ ಮಾತಾ ವಾರ್ಷಿಕ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಚಸೋತಿ ಗ್ರಾಮವು ಮಚೈಲ್ ಮಾತಾ ದೇವಸ್ಥಾನಕ್ಕೆ ತೆರಳಲು ವಾಹನ ಸಂಚಾರಕ್ಕೆ ಯೋಗ್ಯವಾಗಿದ್ದ ಒಂದೇ ಒಂದು ಮಾರ್ಗವಾಗಿತ್ತು. ಇದೀಗ ಮೇಘಸ್ಫೋಟದಿಂದಾಗಿ ಕೆಸರು, ಕಲ್ಲು, ಮಣ್ಣುಗಳಿಂದ ಗ್ರಾಮದ ಬಹುತೇಕ ಭಾಗ ಆವೃತವಾಗಿದೆ. ಈ ಕಾರಣ ಯಾತ್ರೆ ಸ್ಥಗಿತಗೊಳಿಸಲಾಗಿದೆ.
2021ರ ಜುಲೈನಲ್ಲಿ ಕಿಶ್ತವಾಡದ ಹುಂಜಾರ್ ಗ್ರಾಮದಲ್ಲಿ ಮೇಘ ಸ್ಫೋಟ ಸಂಭವಿಸಿ 26 ಮಂದಿ ಮೃತಪಟ್ಟಿದ್ದರು. 17 ಮಂದಿ ಗಾಯಗೊಂಡಿದ್ದರು.
2022 ಜುಲೈನಲ್ಲಿ ಅಮರನಾಥ ದೇಗುಲದ ಬಳಿ ಸಂಭವಿಸದ ಮೇಘಸ್ಫೋಟದಲ್ಲಿ 16 ಯಾತ್ರಾರ್ಥಿಗಳು ಮೃತಪಟ್ಟಿದ್ದು 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
2017ರ ಜುಲೈನಲ್ಲಿ ದೊಡಾ ಜಿಲ್ಲೆಯ ಠಠರಿ ನಗರದಲ್ಲಿ ಮೇಘಸ್ಫೋಟ ಸಂಭವಿಸಿ 6 ಮಂದಿ ಮೃತಪಟ್ಟಿದ್ದರು.
2014ರ ಸೆಪ್ಟೆಂಬರ್ನಲ್ಲಿ ಅತ್ಯಂತ ಭೀಕರವಾದ ಮೇಘಸ್ಫೋಟದಿಂದಾಗಿ ರಾಜಧಾನಿ ಶ್ರೀನಗರವೇ ಬಹುಪಾಲು ಮುಳಗಡೆಯಾಗಿತ್ತು ಇದರಿಂದಾಗಿ 200 ಮಂದಿ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.