ADVERTISEMENT

ನ್ಯಾಯಾಂಗದ ವಿರುದ್ಧ ಸಂಘಟಿತ ದಾಳಿ: ಕಾನೂನು ಸಚಿವರಿಗೆ 90 ಮಾಜಿ ಅಧಿಕಾರಿಗಳ ಪತ್ರ

ಕಾರ್ಯಾಂಗವು ನ್ಯಾಯಾಂಗದ ಮೇಲೆ ಅತಿಕ್ರಮಣ ಮಾಡುವುದು ಜನತಂತ್ರದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಮಾಜಿ ಅಧಿಕಾರಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಮಾರ್ಚ್ 2023, 2:29 IST
Last Updated 31 ಮಾರ್ಚ್ 2023, 2:29 IST
   

ನವದೆಹಲಿ: ಸುಪ್ರಿಂ ಕೋರ್ಟ್‌ ವಿರುದ್ಧ ಟೀಕಾ ಪ್ರಹಾರ ಮಾಡುತ್ತಿರುವ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ವಿರುದ್ದ ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಬಹಿರಂಗ ಪತ್ರ ಬರೆಯುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆ ಹಾಗೂ ನ್ಯಾಯಾಂಗ ಸ್ವಾಯತ್ತಯ ಮೇಲೆ ಸಂಘಟಿತ ದಾಳಿ ನಡೆಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

90 ಮಂದಿ ಮಾಜಿ ಅಧಿಕಾರಿಗಳು ಈ ಪತ್ರಕ್ಕೆ ಸಹಿ ಹಾಕಿದ್ದು, ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಣೆ ಮಾಡುವುದು ಆಯ್ಕೆಯಲ್ಲ. ಕಾರ್ಯಾಂಗವು ನ್ಯಾಯಾಂಗದ ಮೇಲೆ ಅತಿಕ್ರಮಣ ಮಾಡುವುದು ಜನತಂತ್ರದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ.

ADVERTISEMENT

ಇತ್ತೀಚೆಗೆ ಖಾಸಗಿ ವಾಹಿನಿಯೊಂದು ನಡೆಸಿದ ಕಾರ್ಯಕ್ರಮದಲ್ಲಿ ಕಾನೂನು ಸಚಿವ ಕಿರಣ್‌ ರಿಜಿಜು ಅವರು ಆಡಿರುವ ಮಾತುಗಳನ್ನು ಉಲ್ಲೇಖಿಸಿ, ಅವುಗಳಿಗೆ ಅಸಹಮತ ವ್ಯಕ್ತಪಡಿಸಿದ್ದಾರೆ. ನಿಮ್ಮ ಈ ದಾಳಿಯನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

ಕೊಲಿಜಿಯಂ ರವಾನಿಸಿದ ಹೆಸರುಗಳು ವರ್ಷಗಳ ಕಾಲ ಹಾಗೇ ಇದೆ. ಕೊನೆಗೆ ಅದನ್ನು ಅನುಮೋದನೆಯಿಲ್ಲದೆ ಹಿಂತಿರುಗಿಸಲಾಗುತ್ತದೆ. ಸುಪ್ರೀಂ ಕೋರ್ಟ್‌ ಹಾಗೂ ಕೊಲಿಜಿಯಂ ಜತೆಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳುವ ಬದಲು, ನೀವು, ಉಪರಾಷ್ಟ್ರಪತಿ ಮುಂತಾದ ಕಾರ್ಯಾಂಗದ ಉನ್ನತ ಮಟ್ಟದ ಅಧಿಕಾರಿಗಳು ವಿಷಪೂರಿತವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಿದ್ದಾರೆ.

ಕೊಲಿಜಿಯಂ ನೀಡಿದ ಕೆಲವೊಂದು ಹೆಸರನ್ನು ಸ್ವೀಕರಿಸಲು ಕೇಂದ್ರ ಸರ್ಕಾರ ನಿರಾಕರಣೆ ಮಾಡುತ್ತಿರುವುದು ನೋಡಿದರೆ, ಸರ್ಕಾರಕ್ಕೆ ವಿಧೇಯ ನ್ಯಾಯಾಂಗ ಸೃಷ್ಠಿ ಮಾಡುವ ಉದ್ದೇಶ ಇದ್ದಂತಿದೆ. ನ್ಯಾಯಾಂಗದ ಸ್ವಾಯತ್ತತೆಯನ್ನು ರಕ್ಷಣೆ ಮಾಡಲು ನಿವೃತ್ತ ನ್ಯಾಯಮೂರ್ತಿಗಳು, ಹಿರಿಯ ವಕೀಲರು ಹಾಗೂ ತಜ್ಞರು ಬಹಿರಂಗವಾಗಿ ಗಂಭೀರ ಕಾಳಜಿ ವ್ಯಕ್ತಪಡಿಸುತ್ತಿರುವುದು ಅಚ್ಚರಿಯೇನಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ.

ದೆಹಲಿಯ ಮಾಜಿ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌, ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ ಪಿಳ್ಳೈ, ವಿದೇಶಾಂಗ ಇಲಾಖೆಯ ಮಾಜಿ ಕಾರ್ಯದರ್ಶಿ ಸುಜಾತ ಸಿಂಗ್‌ ಹಾಗೂ ಆರೋಗ್ಯ ಇಲಾಖೆಯ ಮಾಜಿ ಕಾರ್ಯದರ್ಶಿ ಕೆ. ಸುಜಾತ ಸಿಂಗ್‌ ರಾವ್‌ ಸೇರಿ ಒಟ್ಟು 90 ಮಂದಿ ಮಾಜಿ ಅಧಿಕಾರಿಗಳು ಈ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.