ADVERTISEMENT

'ಒಂದು ದೇಶ, ಒಂದು ಹಾಲು' ಘೋಷಣೆಗೆ ಅವಕಾಶ ನೀಡಲ್ಲ: ಜೈರಾಮ್ ರಮೇಶ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2023, 10:39 IST
Last Updated 12 ಏಪ್ರಿಲ್ 2023, 10:39 IST
 ಜೈರಾಮ್‌ ರಮೇಶ್‌ 
 ಜೈರಾಮ್‌ ರಮೇಶ್‌    

ನವದೆಹಲಿ (ಪಿಟಿಐ) ಬಿಜೆಪಿಯ ‘ಒಂದು ದೇಶ, ಒಂದು ಹಾಲು’ ಎಂಬ ಘೋಷಣೆಗೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ. ಅಮೂಲ್ ಮತ್ತು ನಂದಿನಿ ನಡುವೆ ಬಲವಂತದ ಸಹಕಾರವನ್ನು ಕೇಂದ್ರ ಸರ್ಕಾರ ಬಯಸುತ್ತಿದೆ ಎಂದು ಪ್ರತಿಪಕ್ಷಗಳು ಬುಧವಾರ ಆರೋಪಿಸಿವೆ.

ಇದು ರಾಜ್ಯಗಳಲ್ಲಿನ ಡೇರಿ ಸಹಕಾರಿ ಸಂಸ್ಥೆಗಳನ್ನು ನಿಯಂತ್ರಿಸುವ ‘ನಾಚಿಕೆಗೇಡಿನ ಕ್ರಮ’ ಎಂದು ಹೇಳಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸಹಕಾರಿ ಸಂಸ್ಥೆಗಳ ನಿಯಂತ್ರಣವನ್ನು ಕೇಂದ್ರೀಕರಿಸುವ ಬಿಜೆಪಿಯ ಪ್ರಯತ್ನಗಳನ್ನು ಪಕ್ಷ ಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದರು.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಒಂದು ತಿಂಗಳು ಇರುವಾಗ ಬಿಜೆಪಿ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದ್ದು, ಕೆಎಂಎಫ್‌ ₹ 21,000 ಕೋಟಿ ವಹಿವಾಟು ನಡೆಸುತ್ತಿದ್ದು ನಂದಿನಿ ಬ್ರಾಂಡ್ ಅನ್ನು ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮೂಲ್) ನೊಂದಿಗೆ ವಿಲೀನಗೊಳಿಸಬಹುದು ಎಂದು ಆತಂಕ ವ್ಯಕ್ತಪಡಿಸಿದೆ. ಆದರೆ, ಈ ಆರೋಪವನ್ನು ಬಿಜೆಪಿ ಬಲವಾಗಿ ತಿರಸ್ಕರಿಸಿದೆ.

ADVERTISEMENT

ಯಾವುದೇ ಕಾರಣಕ್ಕೂ ಬಿಜೆಪಿಯ ಒಂದು ದೇಶ ಒಂದು ಹಾಲು ಎಂಬ ಘೋಷಣೆಗೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದು ರಮೇಶ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ತನ್ನ ಚುನಾವಣಾ ಪ್ರಚಾರದಲ್ಲಿ ಹಾಗೂ ದೇಶದಾದ್ಯಂತ ರಾಜಕೀಯ ಚಟುವಟಿಕೆಗಳಲ್ಲಿ ಈ ನಡೆಗಳ ಹಿಂದಿನ ಕೆಟ್ಟ ಕಾರ್ಯಸೂಚಿ ಬಗ್ಗೆ ಕಾಂಗ್ರೆಸ್‌ ಜನರಿಗೆ ತಿಳಿಸುತ್ತದೆ ಮತ್ತು ಸಾಧ್ಯವಿರುವ ಎಲ್ಲಾ ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಅವುಗಳನ್ನು ವಿರೋಧಿಸಲು ನಿರ್ಧರಿಸುತ್ತದೆ ಎಂದು ಅವರು ಹೇಳಿದರು.

ಬಿಜೆಪಿ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಸಹಕಾರಿ ಸಂಘಗಳನ್ನು ರಾಜ್ಯ ವಿಷಯವಾಗಿ ಸ್ಪಷ್ಟವಾಗಿ ಗುರುತಿಸುವ ಸಂವಿಧಾನವನ್ನು ನಿರ್ಲಕ್ಷಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ಕೆಎಂಎಫ್ ಮೆಗಾ ಡೇರಿ ಉದ್ಘಾಟನೆ ವೇಳೆ ಅಮಿತ್ ಶಾ, ‘ಅಮೂಲ್‌ ಮತ್ತು ನಂದಿನಿ ನಡುವಿನ ಸಹಕಾರವು ಡೈರಿ ಕ್ಷೇತ್ರದಲ್ಲಿ ಅದ್ಭುತ ಮಾಡಬಹುದು’ ಎಂದು ಹೇಳಿದ್ದರು.

ಗುಜರಾತ್ ಮೂಲದ ಅಮೂಲ್ ಏ. 5 ರಂದು ಹಾಲು ಮತ್ತು ಮೊಸರು ಪೂರೈಸಲು ಕರ್ನಾಟಕ ಮಾರುಕಟ್ಟೆಗೆ ಪ್ರವೇಶಿಸುವುದಾಗಿ ಘೋಷಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.