ನವದೆಹಲಿ: ರಾಷ್ಟ್ರೀಯ ಭದ್ರತೆಯ ವಿಚಾರವನ್ನು ನರೇಂದ್ರ ಮೋದಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಮತ್ತು ಅದನ್ನು ಚುನಾವಣಾ ಲಾಭ ಹಾಗೂ ಪ್ರಧಾನಿಯ ಸ್ವಲಾಭದ ದೃಷ್ಟಿಯಿಂದ ಮಾತ್ರವೇ ನೋಡಲಾಗುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ಇತ್ತೀಚೆಗೆ ತಮ್ಮ ವಾರ್ಷಿಕ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ ಮಾತುಗಳು ಮೋದಿ ಅವಧಿಯಲ್ಲಿನ ಭಾರತದ ರಾಷ್ಟ್ರೀಯ ಭದ್ರತೆಯ ‘ಗಂಭೀರ ಅಧೋಗತಿ‘ ಕುರಿತ ಸಕಾಲಿಕ ಎಚ್ಚರಿಕೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಲಡಾಕ್ನಲ್ಲಿ ಚೀನಾ ಒತ್ತುವರಿ ಹಾಗೂ ಜಮ್ಮು ಕಾಶ್ಮೀರದ ರಜೌರಿ–ಪೂಂಚ್ ಭಾಗದಲ್ಲಿ ಹೆಚ್ಚಾಗಿರುವ ಉಗ್ರರ ಚಟುವಟಿಕೆಗಳ ಬಗ್ಗೆ ಜನರಲ್ ಪಾಂಡೆ ಹೇಳಿಕೆಗಳನ್ನು ಉಲ್ಲೇಖಿಸಿರುವ ಜೈರಾಮ್ ರಮೇಶ್, ‘ಲಡಾಕ್ನಲ್ಲಿ ಚೀನಾದ ಒಳನುಸುಳುವಿಕೆ ತಡೆಯಲು ಹಾಗೂ ಅಲ್ಲಿನ 2000 ಚದರ ಕಿ.ಮೀ. ಪ್ರದೇಶ ಪ್ರವೇಶಿಸಲು ಭಾರತದ ಸೈನ್ಯಕ್ಕೆ ಇನ್ನೂ ಸಾಧ್ಯವಾಗಿಲ್ಲ‘ ಎಂದು ಕಿಡಿಕಾರಿದ್ದಾರೆ.
‘ಅಗ್ನಿಪಥ ಯೋಜನೆ ಬಗ್ಗೆ ಸೇನೆಯು ಅಚ್ಚರಿ ವ್ಯಕ್ತಪಡಿಸಿತ್ತು. ನೌಕಾಪಡೆ ಮತ್ತು ವಾಯುಪಡೆಗೆ ಅದು ಅತ್ಯಂತ ಅನಿರೀಕ್ಷಿವಾಗಿತ್ತು ಎನ್ನುವುದನ್ನು ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ. ನರವಣೆ ಅವರ ಪುಸ್ತಕ ಬಯಲು ಮಾಡಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.