ಕಾಂಗ್ರೆಸ್
ಠಾಣೆ: ಅಕ್ರಮ ವ್ಯವಹಾರ ಮತ್ತು ಭ್ರಷ್ಟಾಚಾರದ ಮೂಲಕ ಉಪಮುಖ್ಯಮಂತ್ರಿ ಏಕನಾಥ ಶಿಂದೆ ವ್ಯಾಪಕ ಹಣ ಸಂಪಾದಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್ ಆರೋಪಿಸಿದ್ದಾರೆ.
ಇದೇ 15ರಂದು ನಡೆಯಲಿರುವ ಠಾಣೆ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇದೇ ವೇಳೆ ಮಹಿಳೆಯರ ಮೇಲೆ ವಿವಿಧ ಅಪರಾಧಗಳಲ್ಲಿ ತೊಡಗಿರುವವರನ್ನು ಬೆಂಬಲಿಸುತ್ತಿರುವುದಕ್ಕಾಗಿ ಆಡಳಿತಾರೂಢ ಬಿಜೆಪಿ ಮೇಲೂ ಅವರು ಟೀಕಾ ಪ್ರಹಾರ ನಡೆಸಿದರು.
ಆಡಳಿತ ಪಕ್ಷಗಳಿಗೆ ಹಣದ ಕೊರತೆ ಎದುರಾಗಿದೆ, ಇದರಿಂದ ಅವರು ಅಕ್ರಮ ಮಾರ್ಗಗಳತ್ತ ಮುಖ ಮಾಡಿದ್ದಾರೆ. ಮುಂಬೈ–ನಾಗ್ಪುರ ಸಮೃದ್ಧಿ ಯೋಜನೆಯಲ್ಲಿ ₹2,000 ಕೋಟಿ ಭ್ರಷ್ಟಾಚಾರ ನಡೆದಿದೆ, ಸರ್ಕಾರದ ಜಮೀನುಗಳನ್ನು ಆಡಳಿತ ಪಕ್ಷಗಳೊಂದಿಗೆ ಸಂಪರ್ಕ ಹೊಂದಿರುವ ಸುಲಿಗೆಕೋರರ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಹರ್ಷವರ್ಧನ್ ಗಂಭೀರ ಆರೋಪ ಮಾಡಿದರು.
ಅಕೋಟ್ ನಗರಸಭೆಯಲ್ಲಿ ಎಐಎಂಐಎಂ ಜೊತೆ ಕೈಜೋಡಿಸಿರುವುದಕ್ಕೆ ಬಿಜೆಪಿಯನ್ನು ಹರ್ಷವರ್ಧನ್ ತರಾಟೆಗೆ ತೆಗೆದುಕೊಂಡರು. ಈ ಘಟನೆ ಬಗ್ಗೆ ಸ್ಥಳೀಯ ಬಿಜೆಪಿ ಶಾಸಕರಿಗೆ ನೋಟಿಸ್ ನೀಡಿರುವುದು ಕೇವಲ ಒಂದು ತಂತ್ರ. ಬಿಜೆಪಿ ಅಧಿಕಾರ ಪಡೆಯಲು ಏನು ಬೇಕಾದರೂ ಮಾಡುತ್ತದೆ ಎಂದು ಆರೋಪಿಸಿದರು.
ಠಾಣೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಕ್ರಾಂತ್ ಅವರೊಂದಿಗೆ ಹರ್ಷವರ್ಧನ್ ಪ್ರಣಾಳಿಕೆ ಬಿಡುಗಡೆ ಮಾಡಿದರು. ಗುಂಡಿಗಳಿಲ್ಲದ ರಸ್ತೆಗಳು, ಸಂಚಾರ ವ್ಯವಸ್ಥೆ ಸುಧಾರಣೆ, ಮಹಿಳೆಯರಿಗೆ ವಿಶೇಷ ಬಸ್ ಸೇವೆ, ಘನ ತ್ಯಾಜ್ಯ ನಿರ್ವಹಣೆ, ವಸತಿ ಸಂಘಗಳಿಗೆ ಆಸ್ತಿ ತೆರಿಗೆ ವಿನಾಯಿತಿ ಸೇರಿ ಕೆರೆಗಳ ಪುನಶ್ಚೇತನಕ್ಕೆ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.