ಲಖನೌ: ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ಮತಗಳಿಕೆಯನ್ನೇ ಗುರಿಯಾಗಿಸಿಕೊಂಡು ನೀಡಿದ ಆಶ್ವಾಸನೆಗಳನ್ನು ಈಡೇರಿಸದ ಕಾರಣ ಈಗ ಕೆಟ್ಟ ದಿನಗಳನ್ನು ಎದುರಿಸಬೇಕಾಗಿದೆ ಎಂದು ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಟೀಕಿಸಿದ್ದಾರೆ.
‘ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪಿಯು ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಫೋನ್ ಮತ್ತು ಪದವೀಧರ ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟಿ ನೀಡುವುದಾಗಿಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಘೋಷಿಸಿದ ಮಾರನೇ ದಿನ ಈ ರೀತಿ ಪ್ರತಿಕ್ರಿಯಿಸಿರುವ ಮಾಯಾವತಿ, ‘ಭರವಸೆ ಈಡೇರಿಸದ ಕಾಂಗ್ರೆಸ್ ಪಕ್ಷದ ಮೇಲೆಏತಕ್ಕಾಗಿ ವಿಶ್ವಾಸವಿಡಬೇಕು‘ ಎಂದು ಕೇಳಿದ್ದಾರೆ.
ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಕಾಂಗ್ರೆಸ್ ವಿಫಲವಾಗಿದೆ. ಬಿಜೆಪಿ ಕೂಡ ಅದೇ ದಾರಿಯಲ್ಲಿ ಸಾಗಿದೆ. ಮುಂದೆ ಈ ಪಕ್ಷವೂ ಇಂಥದ್ದೇ ಕೆಟ್ಟದಿನಗಳನ್ನು ಎದುರಿಸಲಿದೆ ಎಂದು ಅವರು ಹೇಳಿದ್ದಾರೆ.
ಹಿಂದಿಯಲ್ಲಿ ಸರಣಿ ಟ್ವೀಟ್ ಮಾಡಿರುವ ಮಾಯಾವತಿ, ‘ಚುನಾವಣಾ ಗಿಮಿಕ್ನ ಭಾಗವಾಗಿ ಕಾಂಗ್ರೆಸ್, ಬಿಜೆಪಿ ಮತ್ತು ಎಸ್ಪಿಯಂತಹ ಪಕ್ಷಗಳು ಇಂಥ ಭರವಸೆಗಳನ್ನು ನೀಡಲು ಆರಂಭಿಸಿವೆ. ಇದರ ಭಾಗವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಿಕ್ಕೆ ಬಂದರೆ, ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಫೋನ್ ಮತ್ತು ಸ್ಕೂಟಿ ಕೊಡುವ ಭರವಸೆ ನೀಡಿದೆ. ಆದರೆ, ಅವರನ್ನು ಯಾರು, ಏಕೆ ಮತ್ತು ಹೇಗೆ ನಂಬಬಹುದು ಎಂಬುದೇ ಮೂಲ ಪ್ರಶ್ನೆಯಾಗಿದೆ‘ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.