ಪಟ್ನಾ: ಸುಳ್ಳು ಹೇಳುವ ವಿಚಾರದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸ್ಪರ್ಧಿಸಲು ನಮ್ಮಿಂದ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.
ಬಿಹಾರದ ವಾಲ್ಮೀಕಿ ನಗರದಲ್ಲಿ ಬುಧವಾರ ನಡೆದ ಚುನಾವಣಾ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 'ಕಾಂಗ್ರೆಸ್ ಪಕ್ಷವು ಈ ವರೆಗೂ ದೇಶಕ್ಕೆ ನಿರ್ದೇಶನ ನೀಡುತ್ತ ಬಂದಿದೆ. ನಾವು ನರೇಗಾ ಯೋಜನೆ ತಂದಿದ್ದೇವೆ. ಸಾಲ ಮನ್ನಾ ಮಾಡಿದ್ದೇವೆ. ದೇಶ ನಡೆಸುವುದು, ರೈತರೊಂದಿಗೆ ನಿಲ್ಲುವುದು ಮತ್ತು ಉದ್ಯೋಗ ಸೃಷ್ಟಿಸುವುದು ನಮಗೆ ತಿಳಿದಿದೆ. ಆದರೆ, ಸುಳ್ಳು ಹೇಳುವುದು ನಮಗೆ ತಿಳಿದಿಲ್ಲ. ಸುಳ್ಳು ಹೇಳುವ ವಿಚಾರದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸ್ಪರ್ಧಿಸಲು ನಮ್ಮಿಂದ ಸಾಧ್ಯವಿಲ್ಲ' ಎಂದು ರಾಹುಲ್ ವಾಗ್ದಾಳಿ ನಡೆಸಿದ್ದಾರೆ.
'ನೋಟು ರದ್ಧತಿ ಮತ್ತು ಲಾಕ್ಡೌನ್ಗಳ ಉದ್ದೇಶ ಒಂದೇ ಆಗಿತ್ತು. ರೈತರು, ಸಣ್ಣ ವ್ಯಾಪಾರಿಗಳು ಮತ್ತು ಕಾರ್ಮಿಕರನ್ನು ನಾಶಪಡಿಸುವ ಗುರಿಯನ್ನು ಅವುಗಳು ಹೊಂದಿದ್ದವು' ಎಂದು ಅವರು ಆರೋಪಿಸಿದ್ದಾರೆ.
'ಈಗ ಪ್ರಧಾನಿ ಮೋದಿ ತಮ್ಮ ಭಾಷಣಗಳಲ್ಲಿ 2 ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳುವುದಿಲ್ಲ. ಆ ವಿಚಾರದಲ್ಲಿ ಸುಳ್ಳು ಹೇಳುತ್ತಿರುವುದಾಗಿ ಅವರಿಗೆ ತಿಳಿದಿತ್ತು. ಅದೀಗ ಜನರಿಗೂ ಸಹ ತಿಳಿದಿದೆ. ನನಗೆ ಒಂದು ವಿಷಯ ಖಾತ್ರಿಯಾಗಿದೆ. ಪ್ರಧಾನಿ ಇಲ್ಲಿಗೆ ಬಂದು ಉದ್ಯೋಗಗಳನ್ನು ನೀಡುವುದಾಗಿ ಹೇಳಿದರೆ, ಜನರು ಅವರನ್ನು ಓಡಿಸುತ್ತಾರೆ' ಎಂದು ರಾಹುಲ್ ಹೇಳಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಬುಧವಾರ ಬೆಳಿಗ್ಗೆ 7ರಿಂದ ಆರಂಭವಾಗಿದೆ. ರಾಜ್ಯದ ಒಟ್ಟು 71 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆಯುತ್ತಿದ್ದು,1,066 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.