ADVERTISEMENT

ಅಲಹಾಬಾದ್‌ಗೆ ಪ್ರಯಾಗ್‌ರಾಜ್ ಹೆಸರಿಡಲು ಯೋಗಿ ಚಿಂತನೆ: ಕಾಂಗ್ರೆಸ್ ತೀವ್ರ ವಿರೋಧ

ಏಜೆನ್ಸೀಸ್
Published 15 ಅಕ್ಟೋಬರ್ 2018, 10:02 IST
Last Updated 15 ಅಕ್ಟೋಬರ್ 2018, 10:02 IST
ಯೋಗಿ ಆದಿತ್ಯನಾಥ್ (ಸಂಗ್ರಹ ಚಿತ್ರ)
ಯೋಗಿ ಆದಿತ್ಯನಾಥ್ (ಸಂಗ್ರಹ ಚಿತ್ರ)   

ಲಖನೌ:ಅಲಹಾಬಾದ್ ಹೆಸರನ್ನು ಪ್ರಯಾಗ್‌ರಾಜ್ ಎಂದುಶೀಘ್ರ ಬದಲಾವಣೆ ಮಾಡುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇದಕ್ಕೆಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಸ್ವಾತಂತ್ರ್ಯ ಚಳವಳಿಯ ಕಾಲದಿಂದಲೇ ದೇಶದ ಇತಿಹಾಸದಲ್ಲಿ ಅಲಹಾಬಾದ್ ಪ್ರಮುಖ ಪಾತ್ರವಹಿಸಿದೆ. ಹೆಸರು ಬದಲಾವಣೆ ಇತಿಹಾಸದ ಮೇಲೆ ಪರಿಣಾಮ ಬೀರಲಿದೆ ಎಂದು ಕಾಂಗ್ರೆಸ್‌ ವಕ್ತಾರ ಓಂಕಾರ್ ಸಿಂಗ್ ಹೇಳಿದ್ದಾರೆ. ಜತೆಗೆ, ಕುಂಭಮೇಳ ನಡೆಯುವ ಪ್ರದೇಶವನ್ನು ಈಗಾಗಲೇ ಪ್ರಯಾಗ್‌ರಾಜ್ ಎಂದೇ ಕರೆಯಲಾಗುತ್ತಿದೆ. ಸರ್ಕಾರಕ್ಕೆ ಆ ಹೆಸರನ್ನೇ ಇಡಬೇಕೆಂದಿದ್ದರೆ ಪ್ರತ್ಯೇಕ ನಗರ ನಿರ್ಮಾಣ ಮಾಡಲಿ. ಅಲಹಾಬಾದ್‌ ಹೆಸರು ಬದಲಾಯಿಸಲೇಬಾರದು ಎಂದೂ ಅವರು ಹೇಳಿದ್ದಾರೆ.

ಮಹಾತ್ಮ ಗಾಂಧಿ ಅವರ ಕಾಲದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಅಲಹಾಬಾದ್ ಸ್ಫೂರ್ತಿಯ ಕೇಂದ್ರವಾಗಿತ್ತು. 1888 ಮತ್ತು 1892ರಲ್ಲಿ ಕಾಂಗ್ರೆಸ್‌ನ ಮಹಾ ಅಧಿವೇಶನಗಳು ಅಲ್ಲಿಯೇ ನಡೆದಿದ್ದವು. ಸ್ವಾತಂತ್ರ್ಯ ಹೋರಾಟಕ್ಕೆ ಖಚಿತ ರೂಪ ನೀಡಿದ ಜಾಗವದು. ದೇಶಕ್ಕೆ ಮೊದಲ ಪ್ರಧಾನಿಯನ್ನು ನೀಡಿದ ಜಾಗ ಅಲಹಾಬಾದ್. ಹೆಸರು ಬದಲಾಯಿಸಿದರೆ ಅಲಹಾಬಾದ್ ವಿಶ್ವವಿದ್ಯಾಲಯವೂ ವರ್ಚಸ್ಸು ಕಳೆದುಕೊಳ್ಳಲಿದೆ ಎಂದೂ ಸಿಂಗ್ ಪ್ರತಿಪಾದಿಸಿದ್ದಾರೆ.

ADVERTISEMENT

ಬಿಜೆಪಿ ಸ್ವಾಗತ: ಹೆಸರು ಬದಲಾಯಿಸುವುದನ್ನು ಬಿಜೆಪಿ ಬೆಂಬಲಿಸಿದೆ. ಕೋಟ್ಯಂತರ ಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳಲಾಗುತ್ತಿರುವ ಈ ನಿರ್ಧಾರಕ್ಕೆ ಸ್ವಾಗತವಿದೆ ಎಂದು ಬಿಜೆಪಿಯ ಉತ್ತರ ಪ್ರದೇಶ ಘಟಕದ ವಕ್ತಾರ ಮನೋಜ್ ಮಿಶ್ರಾ ಹೇಳಿದ್ದಾರೆ.

ಶನಿವಾರ ಅಲಹಾಬಾದ್‌ಗೆ ಭೇಟಿ ನೀಡಿದ್ದ ಯೋಗಿ ಆದಿತ್ಯನಾಥ್,ಒಮ್ಮತ ಮೂಡಿದರೆ ಶೀಘ್ರದಲ್ಲೇ ಅಲಹಾಬಾದ್ ಹೆಸರನ್ನು ಪ್ರಯಾಗ್‌ರಾಜ್ ಎಂದು ಬದಲಾಯಿಸುವುದಾಗಿ ಘೊಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.