ನವದೆಹಲಿ:ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಂದೂ ಮರೆಯದ, ಸರ್ವರಿಗೂ ಸಮಾನತೆಯನ್ನು ನೀಡಿದ ದಿನವೆಂದರೆ 1949ರ ನವೆಂಬರ್ 26. ಇಂದು ಸಂವಿಧಾನ ದಿನ. ನಮ್ಮ ಸಂವಿಧಾನದ ಸೃಷ್ಠಿಗೆ ಕಾರಣಕರ್ತರಾದ ನೆನೆಯಲೇಬೇಕಾದ ದಿನವಿದು.
1949ರ ನ.26ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಗಿತ್ತು. ಸಂವಿಧಾನದ ಕರಡು ಸಿದ್ಧಪಡಿಸುವ ಐತಿಹಾಸಿಕ ಕೆಲಸವನ್ನು ಪೂರ್ಣಗೊಳಿಸಲು, ಸಂವಿಧಾನ ರಚನಾ ಸಭೆಗೆ 2 ವರ್ಷ 11 ತಿಂಗಳು 17 ದಿನ ಹಿಡಿದವು. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೊಂದು ಅರ್ಥ ಕಲ್ಪಿಸಲಾಯಿತು.
ಸಂವಿಧಾನ ದಿನದ ಈ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಆಧುನಿಕ ಧರ್ಮಗ್ರಂಥ: ರಾಮನಾಥ ಕೋವಿಂದ್
‘ನಮ್ಮ ಸಂವಿಧಾನದಲ್ಲಿ ನವೆಂಬರ್ 26 ಒಂದು ಪವಿತ್ರ ದಿನ. ಸಂವಿಧಾನ ಸ್ವತಂತ್ರ್ಯ ಭಾರತದ ಆಧುನಿಕ ಧರ್ಮಗ್ರಂಥವಾಗಿದೆ. ದೇಶದ ಜನರನ್ನು ಸಂವಿಧಾನ ಸಶಕ್ತಗೊಳಿಸುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೆಹಲಿಯಲ್ಲಿ ಇಂದು ಸಂವಿಧಾನ ದಿನ ಕಾರ್ಯಕ್ರಮ ಉದ್ದೇಶಿಸಿ ನುಡಿದರು.
ಭಾರತದ ಜನತೆಯ ಸಹಭಾಗಿತ್ವದೊಂದಿಗೆ ಸಂವಿಧಾನವನ್ನು ಬಲಗೊಳಿಸುವುದು ಹಾಗೂ ರಕ್ಷಿಸುವುದು ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗದ ಕರ್ತವ್ಯ ಎಂದು ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಸಂವಿಧಾನ ಸೃಷ್ಟಿಯ ಕಾರಣಕರ್ತರ ನೆನೆಯುವ ದಿನ: ಮೋದಿ
‘ಇಂದು ಸಂವಿಧಾನ ದಿನ. ನಮ್ಮ ಸಂವಿಧಾನದ ಸೃಷ್ಠಿಗೆ ಕಾರಣಕರ್ತರಾದ ನೆನೆಯಬೇಕಾದ ದಿನ. 1949ರ ನ.26ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಗಿತ್ತು. ಸಂವಿಧಾನದ ಕರಡು ಸಿದ್ಧಪಡಿಸುವ ಐತಿಹಾಸಿಕ ಕೆಲಸವನ್ನು ಪೂರ್ಣಗೊಳಿಸಲು, ಸಂವಿಧಾನ ರಚನಾ ಸಭೆಗೆ 2 ವರ್ಷ 11 ತಿಂಗಳು 17 ದಿನ ಹಿಡಿದವು’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂವಿಧಾನ ಬದ್ಧ ಶಾಸನಸಭೆಗಳ ರಚನೆಗೆ ಕೊಡುಗೆ ನೀಡಿದ ಮಹನೀಯರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ನಮ್ಮ ಸಂವಿಧಾನ ನಮಗೆ ಹೆಮ್ಮೆ, ಅದರಲ್ಲಿರುವ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ನಮ್ಮ ವೈಯಕ್ತಿಕ ಮತ್ತು ಸಾರ್ವಜನಿಕ ಬದುಕಿನಲ್ಲಿ ಸಮಗ್ರತೆಯನ್ನು ಎತ್ತಿಹಿಡಿಯಬೇಕು. ಸಂವಿಧಾನದ ಮೇಲೆ ನಂಬಿಕೆ ಮತ್ತು ಗೌರವ ಹೊಂದಿರಬೇಕು ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.