ADVERTISEMENT

ಚಾವಣಿ ಕುಸಿತ ಪ್ರಕರಣ: ಮೂವರು ಅಧಿಕಾರಿಗಳ ಬಂಧನ

ಸತ್ತವರ ಸಂಖ್ಯೆ 24ಕ್ಕೆ ಏರಿಕೆ, ಹೆಚ್ಚಿನ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

ಪಿಟಿಐ
Published 4 ಜನವರಿ 2021, 8:35 IST
Last Updated 4 ಜನವರಿ 2021, 8:35 IST
ಉತ್ತರ ಪ್ರದೇಶದ ಸಾರಿಗೆ ಸಚಿವ ಜನರಲ್ ವಿ.ಕೆ.ಸಿಂಗ್ ಮತ್ತು ಇತರೆ ಅಧಿಕಾರಿಗಳು ಚಾವಣಿ ಕುಸಿದು 24 ಮಂದಿ ಸಾವನ್ನಪ್ಪಿದ ಮುರದ್‌ನಗರದ ಸ್ಮಶಾನಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
ಉತ್ತರ ಪ್ರದೇಶದ ಸಾರಿಗೆ ಸಚಿವ ಜನರಲ್ ವಿ.ಕೆ.ಸಿಂಗ್ ಮತ್ತು ಇತರೆ ಅಧಿಕಾರಿಗಳು ಚಾವಣಿ ಕುಸಿದು 24 ಮಂದಿ ಸಾವನ್ನಪ್ಪಿದ ಮುರದ್‌ನಗರದ ಸ್ಮಶಾನಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.   

ಘಾಜಿಯಾಬಾದ್‌: ಉತ್ತರ ಪ್ರದೇಶದ ಮುರಾದ್‌ನಗರದ ಸ್ಮಶಾನದಲ್ಲಿ ಭಾನುವಾರ ಸಂಭವಿಸಿದ ಸಂಕೀರ್ಣವೊಂದರ ಚಾವಣಿ ಕುಸಿತ ದುರಂತದಲ್ಲಿ ಸತ್ತವರ ಸಂಖ್ಯೆ 24ಕ್ಕೆ ಏರಿದ್ದು, ಘಟನೆಗೆ ಸಂಬಂಧಿಸಿದಂತೆ ಘಾಜಿಯಾಬಾದ್ ಪೊಲೀಸರು ಮಹಾನಗರ ಪಾಲಿಕೆಯ ಮೂವರು ಅಧಿಕಾರಿಗಳನ್ನು ಸೋಮವಾರ ಬಂಧಿಸಿದ್ದಾರೆ.

‘ಘಟನೆಯ ಸಂಬಂಧ ಮಹಾನಗರ ಪಾಲಿಕೆಯ ಕಾರ್ಯನಿರ್ವಹಣಾಧಿಕಾರಿ ನಿಹಾರಿಕಾ ಸಿಂಗ್‌, ಜೂನಿಯರ್ ಎಂಜಿನಿಯರ್ ಚಂದ್ರಪಾಲ್ ಮತ್ತು ಸೂಪರ್‌ವೈಸರ್ ಆಶಿಶ್ ಅವರನ್ನು ಬಂಧಿಸಿರುವುದಾಗಿ ಮುರಾದ್‌ನಗರ ಗ್ರಾಮಾಂತರ ವಿಭಾಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇರಾಜ್‌ ರಾಜಾ ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಗುತ್ತಿಗೆದಾರರ ಅಜಯ್‌ ತ್ಯಾಗಿ ಅವರಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.

ADVERTISEMENT

ಈ ನಡುವೆ ಮೃತರ ಕುಟುಂಬದವರು ಹೆಚ್ಚುವರಿ ಪರಿಹಾರ ಹಾಗೂ ಪ್ರತಿ ಕುಟುಂಬಕ್ಕೆ ಸರ್ಕಾರಿ ಕೆಲಸ ನೀಡುವಂತೆ ಒತ್ತಾಯಿಸಿ ದೆಹಲಿ –ಮೀರತ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಶವಸಂಸ್ಕಾರದಲ್ಲಿ ಪಾಲ್ಗೊಳ್ಳಲು ಇಲ್ಲಿನ ಸ್ಮಶಾನಕ್ಕೆ ತೆರಳಿದ್ದ 24 ಮಂದಿ, ಸುರಿಯುತ್ತಿದ್ದ ಮಳೆಯಿಂದ ರಕ್ಷಣೆ ಪಡೆಯಲು ಸ್ಮಶಾನದ ಸಂಕೀರ್ಣವೊಂದರ ಚಾವಣಿಯ ಕೆಳಗೆ ನಿಂತಿದ್ದರು. ಜೋರಾದ ಮಳೆಯಿಂದಾಗಿ ಚಾವಣಿ ಕುಸಿದ ಪರಿಣಾಮ ಸ್ಥಳದಲ್ಲೇ 15 ಮಂದಿ ಸಾವನ್ನಪ್ಪಿದ್ದರು.

ಘಟನೆಯಲ್ಲಿ ಮೃತಪಟ್ಟವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಸಂಬಂಧಿಕರಿಗೆ ತಲಾ ₹ 2ಲಕ್ಷ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.