ADVERTISEMENT

ಭ್ರಷ್ಟಾಚಾರ: ದೀಪಕ್‌ ಪಂಡಿತ್‌ ವಿರುದ್ಧ ಪ್ರಕರಣ

ಪಿಟಿಐ
Published 28 ಫೆಬ್ರುವರಿ 2020, 19:28 IST
Last Updated 28 ಫೆಬ್ರುವರಿ 2020, 19:28 IST

ನವದೆಹಲಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಲ್ಲಿ ಜಿಎಸ್‌ಟಿ ಮತ್ತು ಕೇಂದ್ರ ಅಬಕಾರಿ ಇಲಾಖೆ ಸಹಾಯಕ ಆಯುಕ್ತ ದೀಪಕ್‌ ಪಂಡಿತ್‌ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ದೀಪಕ್‌ ಅವರು ₹3.96 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ ಮತ್ತು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಚಾರ ನಡೆಸಿದ್ದಾರೆ ಎಂದೂ ಆರೋಪಿಸಲಾಗಿದೆ.

‘ಬಾಲಾಕೋಟ್‌ ಮೂಲಕ ಪಾಕ್‌ಗೆ ಸಂದೇಶ’

ADVERTISEMENT

ನವದೆಹಲಿ(ಪಿಟಿಐ): 'ಗಡಿಯುದ್ದಕ್ಕೂ ಇರುವ ಮೂಲಸೌಕರ್ಯಗಳನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುವಂತಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಬಾಲಾಕೋಟ್‌ ವೈಮಾನಿಕ ದಾಳಿ ಮತ್ತು ನಿರ್ದಿಷ್ಟ ದಾಳಿಗಳ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡಿದ್ದೇವೆ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ಹೇಳಿದ್ದಾರೆ.

ಚಾರಸಂಕಿರಣದಲ್ಲಿ ಮಾತನಾಡಿದ ಅವರು, ‘ಭವಿಷ್ಯದಲ್ಲಿ ಭಾರತದ ವಿರುದ್ಧ ಯಾವುದೇ ದುಸ್ಸಾಹಸಕ್ಕೆ ಕೈಹಾಕುವ ಮೊದಲು ಆ ದೇಶ ನೂರು ಬಾರಿ ಯೋಚಿಸಬೇಕು’ ಎಂದಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾಗಿರುವ 40 ಮಂದಿ ಸಿಆರ್‌ಪಿಎಫ್‌ ಯೋಧರನ್ನು ಸ್ಮರಿಸಿದ ಅವರು, ಬಾಲಾಕೋಟ್‌ ವೈಮಾನಿಕ ದಾಳಿಯಲ್ಲಿ ಪಾಲ್ಗೊಂಡಿದ್ದ ಯೋಧರಿಗೆ ಕೃತಜ್ಞತೆ ಸಲ್ಲಿಸಿದರು.

‘ಸಿಎಎ: ವಿರೋಧ ಪಕ್ಷಗಳಿಂದ ತಪ್ಪು ಮಾಹಿತಿ’

ಭುವನೇಶ್ವರ(ಪಿಟಿಐ): ‘ಪೌರತ್ವ ತಿದ್ದುಪಡಿ ಕಾಯ್ದೆಯ(ಸಿಎಎ) ಬಗ್ಗೆ ವಿರೋಧ ಪಕ್ಷಗಳು ತಪ್ಪು ಮಾಹಿತಿ ಹರಡುತ್ತಿದ್ದು, ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ.

ಇಲ್ಲಿ ಹಮ್ಮಿಕೊಂಡಿದ್ದ ಸಿಎಎ ಪರ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಕಾಯ್ದೆಯಿಂದಾಗಿ ಮುಸ್ಲಿಮರು ಭಾರತದ ಪೌರತ್ವವನ್ನು ಕಳೆದುಕೊಳ್ಳಲಿದ್ದಾರೆ ಎಂದು ವಿರೋಧ ಪಕ್ಷಗಳು ಪ್ರಚಾರ ಮಾಡುತ್ತಿವೆ. ಕಾಯ್ದೆಯ ಯಾವ ಭಾಗವು ಪೌರತ್ವವನ್ನು ಕಸಿಯುವ ಬಗ್ಗೆ ಹೇಳಿದೆ ಎಂಬುದನ್ನು ಸಮಸ್ಯೆ ಸೃಷ್ಟಿಸುವವರಲ್ಲಿ ಜನರು ಕೇಳಬೇಕು’ ಎಂದಿದ್ದಾರೆ.

ಒಟ್ಟಿಗೆ ಊಟ ಮಾಡಿದ ಮಮತಾ–ಶಾ: ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪೂರ್ವ ವಲಯ ಮಂಡಲ ಸಭೆಯ ಬಳಿಕ ಅಮಿತ್‌ ಶಾ ಮತ್ತು ಪಶ್ಚಿಮ ಬಂಗಾಳ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎದುರು–ಬದುರು ಕುಳಿತು ಊಟ ಮಾಡುವ ಮೂಲಕ ಗಮನ ಸೆಳೆದರು.

ಬಿಜೆಪಿ ನಾಯಕನ ವಿರುದ್ಧ ಅತ್ಯಾಚಾರ ಪ್ರಕರಣ

ಠಾಣೆ (ಪಿಟಿಐ): ನಗರ ಪಾಲಿಕೆ ಸದಸ್ಯೆಯೊಬ್ಬರ ಮೇಲೆ ಅತ್ಯಾಚಾರ ಹಾಗೂ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪದಡಿ ಬಿಜೆಪಿಯ ಮಾಜಿ ಶಾಸಕ ನರೇಂದ್ರ ಮೆಹ್ತಾ ವಿರುದ್ಧ ಶುಕ್ರವಾರ ದೂರು ದಾಖಲಾಗಿದೆ.

ಠಾಣೆ ಜಿಲ್ಲೆಯ ಭಯಂದರ್‌ ನಗರದಲ್ಲಿ ದೌರ್ಜನ್ಯ ನಡೆದಿದ್ದು, ಮೆಹ್ತಾ ಸಹಾಯಕ ಸಂಜಯ್‌ ತರ್ಥರೆ ವಿರುದ್ಧವೂ ದೂರು ದಾಖಲಾಗಿದೆ. ಮೂರು ದಿನದ ಹಿಂದೆ ಬಿಜೆಪಿಗೆ ರಾಜೀನಾಮೆ ನೀಡಿದ್ದ ಮೆಹ್ತಾ ಹಾಗೂ ಸಂಜಯ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು. ಆದರೆ ನರೇಂದ್ರ ಅವರನ್ನು ಬಂಧಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.