ADVERTISEMENT

ಐಐಆರ್‌ಸಿ ಈಗ ಸಿಟಿಆರ್‌ಸಿ: ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ

ಪಿಟಿಐ
Published 2 ಡಿಸೆಂಬರ್ 2025, 14:32 IST
Last Updated 2 ಡಿಸೆಂಬರ್ 2025, 14:32 IST
ನಿತ್ಯಾನಂದ ರೈ
ನಿತ್ಯಾನಂದ ರೈ   

ನವದೆಹಲಿ: ‘ಕೇಂದ್ರ ಸರ್ಕಾರವು ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿರುವ (ಎನ್ಐಎ) ಐಎಸ್‌ ತನಿಖಾ ಸಂಶೋಧನಾ ಘಟಕದ (ಐಐಆರ್‌ಸಿ) ವ್ಯಾಪ್ತಿಯನ್ನು ಇತರ ಭಯೋತ್ಪಾದನಾ ಕ್ಷೇತ್ರಕ್ಕೂ ವಿಸ್ತರಿಸಿದೆ. ಅದನ್ನು ಭಯೋತ್ಪಾದನಾ ನಿಗ್ರಹ ಸಂಶೋಧನಾ ಘಟಕ (ಸಿಟಿಆರ್‌ಸಿ) ಎಂದು ಮರುನಾಮಕರಣ ಮಾಡಿದೆ’ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಸಂಸತ್‌ಗೆ ಮಂಗಳವಾರ ತಿಳಿಸಿದರು.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಸಚಿವರು, ‘ಎನ್‌ಐಎನಲ್ಲಿ ಮಾನವ ಕಳ್ಳಸಾಗಣೆ ವಿರೋಧಿ ವಿಭಾಗ (ಎಎಚ್‌ಟಿಡಿ), ಸೈಬರ್‌ ಭಯೋತ್ಪಾದನಾ ವಿರೋಧಿ ವಿಭಾಗ (ಎಸಿಟಿಡಿ), ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್‌ಎಟಿಎಫ್) ಕೋಶ, ಹಣಕಾಸು ವಿಶ್ಲೇಷಣಾ ಘಟಕ (ಎಫ್‌ಎಯು) ಮತ್ತು ಕಾನೂನು ತಜ್ಞರನ್ನು ಒಳಗೊಂಡ ವಿಶೇಷ ಘಟಕದಂತಹ ವಿಶೇಷ ವಿಭಾಗಗಳನ್ನು ರಚಿಸಲಾಗಿದೆ’ ಎಂದು ಹೇಳಿದರು.

‘ದೊಡ್ಡ ದತ್ತಾಂಶ ವಿಶ್ಲೇಷಣೆಯನ್ನು ಸಕ್ರಿಯಗೊಳಿಸಲು, ಮೇಲ್ವಿಚಾರಣೆಯನ್ನು ಬಲಪಡಿಸಲು, ವಿವಿಧ ತನಿಖಾ ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳ ಯಾಂತ್ರೀಕೃತಗೊಳಿಸುವಿಕೆ, ಡಿಜಿಟಲೀಕರಣವನ್ನು ಸುಗಮಗೊಳಿಸಲು ಎನ್‌ಐಎನಲ್ಲಿ ರಾಷ್ಟ್ರೀಯ ಭಯೋತ್ಪಾದನಾ ದತ್ತಾಂಶ ಕ್ರೋಡೀಕರಣ ಮತ್ತು ವಿಶ್ಲೇಷಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಸರ್ಕಾರವು 2018ರ ಜನವರಿಯಲ್ಲಿ ಎನ್‌ಐಎನಲ್ಲಿ ಐಎಸ್‌ ತನಿಖಾ ಸಂಶೋಧನಾ ಘಟಕವನ್ನು ರಚಿಸಿತ್ತು. ಅದರ ವ್ಯಾಪ್ತಿಯನ್ನು ಇತರ ಭಯೋತ್ಪಾದನಾ ಕ್ಷೇತ್ರಗಳಿಗೆ ವಿಸ್ತರಿಸಿದೆ’ ಎಂದು ರೈ ತಿಳಿಸಿದರು.

ಎನ್‌ಐಎಯನ್ನು ಬಲಪಡಿಸಲು ತೆಗೆದುಕೊಂಡ ಕ್ರಮಗಳ ವಿವರಗಳನ್ನು ನೀಡಿದ ಅವರು, ‘ಸಂಸ್ಥೆಯು ಪ್ರಸ್ತುತ ಒಟ್ಟು 1,901 ಮಂಜೂರಾದ ಹುದ್ದೆಗಳನ್ನು ಹೊಂದಿದ್ದು, ಅವುಗಳಲ್ಲಿ 769 ಹುದ್ದೆಗಳನ್ನು ಕಳೆದ ಐದು ವರ್ಷಗಳಲ್ಲಿ ಭರ್ತಿ ಮಾಡಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.