ADVERTISEMENT

ಉತ್ತರ ಪ್ರದೇಶ: 7 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಆರಂಭ

ಪಿಟಿಐ
Published 10 ನವೆಂಬರ್ 2020, 4:23 IST
Last Updated 10 ನವೆಂಬರ್ 2020, 4:23 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ಉತ್ತರ ಪ್ರದೇಶದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ನವೆಂಬರ್ 3ರಂದು ನಡೆದ ಉಪಚುನಾವಣೆಯ ಮತ ಎಣಿಕೆ ಮಂಗಳವಾರ ಆರಂಭವಾಗಿದೆ.
ನೌಗಾಂವ್ ಸದತ್, ತುಂಡ್ಲಾ, ಬಂಗರ್‌ಮೌ, ಬುಲಂದ್‌ಶಹರ್, ಡಿಯೊರಿಯಾ, ಘಟಂಪುರ್ ಮತ್ತು ಮಹಲಾನಿ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು 88 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮಹಲಾನಿ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಧಿಪತ್ಯವಿದ್ದು ಇನ್ನುಳಿದ ಸೀಟುಗಳು ಬಿಜೆಪಿ ಪ್ರಾಬಲ್ಯವಿರುವುದಾಗಿದೆ.

ನೌಗಾಂವ್ ಸದತ್ ಕ್ಷೇತ್ರದಲ್ಲಿ ಸಚಿವ ಹಾಗೂ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಅವರ ನಿಧನದಿಂದ ಸೀಟು ತೆರವಾಗಿತ್ತು. ಕಾನ್‌ಪುರ್ ನಗರ ಜಿಲ್ಲೆಯ ಘಟಂಪುರ್ ಕ್ಷೇತ್ರ ಸಚಿವೆ ಕಮಲ್ ರಾನಿ ವರುಣ್ ಅವರ ನಿಧನದಿಂದ ತೆರವಾಗಿತ್ತು.ಈ ಇಬ್ಬರು ಸಚಿವರು ಕೋವಿಡ್‌ನಿಂದ ಮೃತಪಟ್ಟಿದ್ದರು.

ತುಂಡ್ಲಾ ಕ್ಷೇತ್ರದಲ್ಲಿ ಶಾಸಕ ಎಸ್.ಪಿ.ಸಿಂಗ್ ಬಘೇಲ್ ಅವರು ಲೋಕಸಭೆಗೆ ಆಯ್ಕೆಯಾದ ಕಾರಣ ಈ ಸೀಟು ತೆರವಾಗಿತ್ತು. ಅದೇ ವೇಳೆ ಉನ್ನಾವ್‌ನ ಬಂಗರ್‌ಮೌ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಕುಲ್‌ದೀಪ್ ಸಿಂಗ್ ಸೆಂಗರ್ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾದ ಕಾರಣ ಇಲ್ಲಿ ಉಪಚುನಾವಣೆ ನಡೆದಿದೆ.

ADVERTISEMENT

ಬುಲಂದ್‌‌ಶಹರ್, ಡಿಯೊರಿಯಾ ಮತ್ತು ಮಹಲಾನಿ ಕ್ಷೇತ್ರಗಳಲ್ಲಿ ಹಾಲಿ ಶಾಸಕರಾದ ವಿರೇಂದ್ರ ಸಿಂಗ್ ಸಿರೋಹಿ, ಜನಮೇಜಯ್ ಸಿಂಗ್ ಮತ್ತು ಪ್ರಶಾಂತ್ ಯಾದವ್ ನಿಧನದಿಂದ ಸೀಟು ತೆರವಾಗಿತ್ತು.

ಬುಲಂದ್‍ಶಹರ್‌ ಕ್ಷೇತ್ರದಲ್ಲಿ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಆಜಾದ್ ಸಮಾಜ್ ಪಾರ್ಟಿಯ ಮೊಹಮ್ಮದ್ ಯಮೀನ್ ಕಣದಲ್ಲಿದ್ದಾರೆ. ಬುಲಂದ್‌ಶಹರ್‌ನಲ್ಲಿ 18 ಅಭ್ಯರ್ಥಿಗಳು ಕಣದಲ್ಲಿದ್ದು, ಘಟಂಪುರ್‌ನಲ್ಲಿ ಅತೀ ಕಡಿಮೆ ಎಂದರೆ 6 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮಹಲಾನಿ -16 , ನೌಗಾಂನ್ ಸದತ್ ಮತ್ತು ಡಿಯೊರಿಯಾ - 10, ಬಂಗರ್‌ಮೌ ಮತ್ತು ತುಂಡ್ಲಾದಲ್ಲಿ ತಲಾ 10 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.