ನವದೆಹಲಿ: ಕಳ್ಳತನ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬನನ್ನು ಅಕ್ರಮವಾಗಿ ಬಂಧಿಸಿ, ಜಾಮೀನಿಗಾಗಿ ಹಣದ ಬೇಡಿಕೆಯಿಟ್ಟ ದೆಹಲಿ ಪೊಲೀಸರ ವಿರುದ್ಧ ಅಲ್ಲಿನ ನ್ಯಾಯಾಲಯವು ಆಕ್ರೋಶ ವ್ಯಕ್ತಪಡಿಸಿದೆ.
ರವಿ ನಂದಾ ಎಂಬುವರ ಅಕ್ರಮ ಬಂಧನದ ಕುರಿತಾಗಿ ವಿಚಾರಣೆ ನಡೆಸಿ ಕ್ರಮ ಕೈಗೊಂಡ ಬಗ್ಗೆ ಈ ತಿಂಗಳ 13 ರೊಳಗೆ ವರದಿ ಸಲ್ಲಿಸಬೇಕು. ಅಲ್ಲದೆ ಹಣದ ಬೇಡಿಕೆಯಿಟ್ಟ ಅಧಿಕಾರಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದ್ವಾರಕದ ಪೊಲೀಸ್ ಉಪ ಆಯುಕ್ತರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸೋನು ಅಗ್ನಿಹೋತ್ರಿ ಅವರು ನಿರ್ದೇಶನ ನೀಡಿದ್ದಾರೆ.
ಅಲ್ಲದೆ ದೆಹಲಿ ನ್ಯಾಯಾಲಯವು ರವಿ ನಂದಾ ಜಾಮೀನು ಮಂಜೂರು ಮಾಡಿದೆ.
ಕಳವು ದೂರಿಗೆ ಹೋಲುವಂತೆ ಬಂಧಿತನ ಸಹೋದರಿಯ ಬಳಿ ಕೆಂಪು ಮತ್ತು ಹಳದಿ ಬಣ್ಣದ ದ್ವಿಚಕ್ರ ವಾಹನವಿತ್ತು. ಈ ಆಧಾರದಲ್ಲಿ ರವಿ ನಂದಾನನ್ನು ಬಂಧಿಸಲಾಗಿತ್ತು. ಆದರೆ ಆರೋಪಿ ಬಳಿಯಿಂದ ಯಾವುದೇ ವಾಹನವನ್ನು ವಶಕ್ಕೆ ಪಡೆದಿಲ್ಲ’ ಎಂದು ತನಿಖಾ ಅಧಿಕಾರಿ (ಐಒ) ನ್ಯಾಯಾಲಯಕ್ಕೆ ತಿಳಿಸಿದ್ದರು.
ಐಒ ಅಕ್ರಮವಾಗಿ ರವಿ ನಂದಾನನ್ನು ಬಂಧಿಸಿದ್ದಾರೆ ಎಂದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ನ್ಯಾಯಾಧೀಶ ಸೋನು ಅಗ್ನಿಹೋತ್ರಿ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.