ADVERTISEMENT

ಭಾರತದಲ್ಲಿ ಕೋವಿಡ್ ಲಸಿಕೆ ಕೊರತೆ: ಕಳವಳ ವ್ಯಕ್ತಪಡಿಸಿದ ದೆಹಲಿ ಹೈಕೋರ್ಟ್

ಪಿಟಿಐ
Published 4 ಜೂನ್ 2021, 16:32 IST
Last Updated 4 ಜೂನ್ 2021, 16:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಉತ್ತಮ ಮಾರ್ಗವೆಂದರೆ ಎಲ್ಲರಿಗೂ ಲಸಿಕೆ ನೀಡುವುದು ಎಂದು ಕೇಂದ್ರ ಸರ್ಕಾರ ಹೇಳಿದ್ದರೂ ಕೂಡ ಕೋವಿಡ್-19 ಎರಡನೇ ಅಲೆಯಲ್ಲಿ ಲಸಿಕೆ ಕೊರತೆ ಎಲ್ಲರನ್ನೂ ಬಾಧಿಸುತ್ತಿದೆ ಎಂದು ದೆಹಲಿ ಹೈಕೋರ್ಟ್ ಶುಕ್ರವಾರಕಳವಳ ವ್ಯಕ್ತಪಡಿಸಿದೆ.

ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಸಹಯೋಗದೊಂದಿಗೆ ಭಾರತದ ಪ್ಯಾನೇಸಿಯಾ ಬಯೋಟೆಕ್ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ ತಯಾರಿಕೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ ಕೈಗೆತ್ತಿಕೊಂಡಿತು.

ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲು ಆರ್ಬಿಟಲ್ ಮೊತ್ತವಾದ ₹ 14 ಕೋಟಿಯನ್ನು 2012ರಿಂದ ಈ ವರೆಗಿನ ಬಡ್ಡಿ ಸೇರಿಸಿ 'ಪ್ಯಾನೇಸಿಯಾ ಬಯೋಟೆಕ್‌'ಗೆ ನೀಡುವಂತೆ ಹೈಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ. ಇದು ಲಸಿಕೆ ತಯಾರಿಸಲು ಕಂಪನಿಯು ಸರ್ಕಾರದಿಂದ ಅನುಮತಿ ಪಡೆಯುತ್ತದೆ ಎಂಬ ಷರತ್ತಿಗೆ ಒಳಪಟ್ಟಿರುತ್ತದೆ.

ADVERTISEMENT

ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ನಜ್ಮಿ ವಾಜಿರಿ ಅವರನ್ನೊಳಗೊಂಡ ನ್ಯಾಯಪೀಠವು, ಕಂಪನಿಗೆ ಆರ್ಬಿಟ್ರಲ್ ಟ್ರಿಬ್ಯೂನಲ್ ಬಿಡುಗಡೆ ಮಾಡಿದ ಮೊತ್ತವು ಸಂಸ್ಥೆಯ ಜವಾಬ್ದಾರಿಗೆ ಒಳಪಟ್ಟಿರುತ್ತದೆ. ಹೀಗೆ ನೀಡಲಾದ ಮೊತ್ತ ಮರಳಿ ಲಭ್ಯವಾಗುವ ವರೆಗೆ, ಸ್ಪುಟ್ನಿಕ್ ವಿ ಮಾರಾಟದಿಂದ ಬರುವ ಆದಾಯದ ಶೇಕಡಾ 20 ರಷ್ಟು ಮೊತ್ತವನ್ನು ನ್ಯಾಯಾಲಯದ ರಿಜಿಸ್ಟ್ರಾರ್‌ನಲ್ಲಿ ಠೇವಣಿ ಮಾಡಬೇಕು ಎಂದಿದೆ.

ಇಂದು, ಎರಡನೇ ಅಲೆಯ ಸಮಯದಲ್ಲಿ ಈ ವಿಚಾರಗಳನ್ನು ತೆಗೆದುಕೊಂಡ ರೀತಿಗೆ ನಮಗೆ ಸ್ವಲ್ಪ ಕಳವಳವಾಗಿದೆ. ಜವಾಬ್ದಾರಿಯುತ ಪ್ರಜೆಯಾಗಿ ನೀವು ಸಹ ಕಳವಳಕ್ಕೊಳಗಾಗುತ್ತೀರಿ. ಲಸಿಕೆ ಕೊರತೆಯೂ ಪ್ರತಿಯೊಬ್ಬರಿಗೂ ತಟ್ಟುತ್ತಿದೆ. ಇಂದಿಗೂ ದೆಹಲಿಯಲ್ಲಿ ಲಸಿಕೆ ಲಭ್ಯವಿಲ್ಲ… ಎಂದು ನ್ಯಾಯಪೀಠ ಹೇಳಿದೆ.

ರಷ್ಯಾದಿಂದ ಯಾರಾದರೂ ಹಿಮಾಚಲ ಪ್ರದೇಶದಲ್ಲಿ ಮೂಲಸೌಕರ್ಯಗಳನ್ನು ಕಂಡುಕೊಳ್ಳಲು ಸಮರ್ಥರಾಗಿದ್ದಾರೆ ಆದರೆ, ಕೇಂದ್ರವು ಅದನ್ನು ಮಾಡಲು ವಿಫಲವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಜುಲೈ 2020 ರ ಆದೇಶವನ್ನು ಮಾರ್ಪಡಿಸುವಂತೆ ಕೋರಿ ದೆಹಲಿ ಮೂಲದ ಪ್ಯಾನೇಸಿಯಾ ಬಯೋಟೆಕ್ ಸಲ್ಲಿಸಿದ ಮನವಿಯ ಮೇರೆಗೆ ಹೈಕೋರ್ಟ್ ಈ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.