ನವದೆಹಲಿ: ದೇಶಾದ್ಯಂತ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಜನವರಿ 16 ಶನಿವಾರದಂದು ಚಾಲನೆ ನೀಡಲಾಗಿದೆ. ಈ ನಡುವೆ ರಾಷ್ಟ್ರ ರಾಜಧಾನಿ ನವದಹೆಲಿಯಲ್ಲಿ ಮೊದಲ ದಿನ ಕೋವಿಡ್-19 ಲಸಿಕೆ ಚುಚ್ಚುಮದ್ದನ್ನು ಪಡೆದಆರೋಗ್ಯ ಕಾರ್ಯಕರ್ತರ ಪೈಕಿ ಒಂದು 'ತೀವ್ರ' ಹಾಗೂ 51 'ಕಡಿಮೆ ತೀವ್ರತೆ'ಯ ಅಡ್ಡಪರಿಣಾಮ (ಎಇಎಫ್ಐ) ಉಂಟಾಗಿರುವ ಪ್ರಕರಣ ವರದಿಯಾಗಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗಿರುವ ಕೋವಿಡ್-19 ಲಸಿಕೆಯಿಂದ ಮೊದಲ ದಿನದಲ್ಲಿ ಒಂದು ತೀವ್ರ ಹಾಗೂ 51 ಕಡಿಮೆ ತೀವ್ರತೆಯ ಅಡ್ಡಪರಿಣಾಮಗಳು ದಾಖಲಾಗಿದೆ.
ನವದೆಹಲಿಯ 11 ಜಿಲ್ಲೆಗಳಲ್ಲಿ ಮೊದಲ ದಿನದಲ್ಲಿ 8,117 ಆರೋಗ್ಯ ಸೇನಾನಿಗಳಿಗೆ ಲಸಿಕೆ ಹಂಚುವ ಗುರಿ ಹೊಂದಲಾಗಿತ್ತು. ಈ ಪೈಕಿ ಒಟ್ಟು 4,319 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ವರದಿಯು ತಿಳಿಸಿದೆ.
ಅಡ್ಡಪರಿಣಾಮ ಉಂಟಾದಾಗ ರವಾನಿಸಲು ನಿಗದಿಪಡಿಸಿದ್ದ ಕೇಂದ್ರಕ್ಕೆ ಒಬ್ಬ ವ್ಯಕ್ತಿಯನ್ನು ರವಾನಿಸಲಾಯಿತು. ಉಳಿದವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿಲ್ಲ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೋವಿಡ್-19 ಲಸಿಕೆ ಪಡೆದ ಬಳಿಕ ಆರೋಗ್ಯದಲ್ಲಿ ಏರು-ಪೇರಾದರೆ ಅದನ್ನು ರೋಗ ನಿರೋಧಕ ಪಡೆದ ಬಳಿಕ ಉಂಟಾಗಿರುವ ಅಡ್ಡ ಪರಿಣಾಮ (ಎಇಎಫ್ಐ) ಎಂದು ಪರಿಗಣಿಸಲಾಗುತ್ತದೆ.
ಕೆಲವರಿಗೆ ತಲೆಸುತ್ತು ಹಾಗೂ ತಲೆನೋವು ಉಂಟಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರನ್ನು ಮುಂದಿನ ಕೆಲವು ದಿನಗಳ ಕಾಲ ನಿಗಾ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆ ಚುಚ್ಚುಮದ್ದು ಪಡೆದ ಭದ್ರತಾ ಸಿಬ್ಬಂದಿಯಲ್ಲಿ ಅಲರ್ಜಿ ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಇದನ್ನು ತೀವ್ರ ಅಡ್ಡ ಪರಿಣಾಮವೆಂದು ಪರಿಗಣಿಸಲಾಗಿದೆ. ಹಾಗೆಯೇ ದಕ್ಷಿಣ ಹಾಗೂ ನೈಋತ್ಯ ಜಿಲ್ಲೆಗಳಲ್ಲಿ 11 ಕಡಿಮೆ ತೀವ್ರತೆಯ ಅಡ್ಡ ಪರಿಣಾಮ ದಾಖಲಾಗಿದೆ.
ಮೊದಲ ದಿನದಲ್ಲಿ ದೆಹಲಿಯ 81 ಕೇಂದ್ರಗಳಲ್ಲಿ ತಲಾ 100 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ಹಂಚುವ ಗುರಿ ಹೊಂದಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.