ಪುಣೆ: ಪುಣೆ ಜಿಲ್ಲೆಯಲ್ಲಿ ಇದುವರೆಗೆ ಸುಮಾರು 270 ಅಪಾಯಕಾರಿ ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗಿವೆ. ಆಸ್ಪತ್ರೆಗಳಲ್ಲಿ ಈ ರೋಗಿಗಳ ನಿರ್ವಹಣೆಗಾಗಿ ಪ್ರಮಾಣೀಕೃತ ಕಾರ್ಯಾಚರಣೆ ಮಾರ್ಗಸೂಚಿಗೆ ಕ್ರಮ ಕೈಗೊಳ್ಳುವಂತೆ ಸರ್ಕಾರವು ಕೋವಿಡ್ ವಿಭಾಗೀಯ ಕಾರ್ಯಪಡೆಗೆ ಶುಕ್ರವಾರ ಸೂಚನೆ ನೀಡಿದೆ.
‘ಪುಣೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಇದುವರೆಗೆ 270 ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗಿವೆ. ಕೋವಿಡ್–19ನಿಂದ ಚೇತರಿಸಿಕೊಂಡ ಕೆಲವು ರೋಗಿಗಳಲ್ಲಿ ಈ ರೀತಿಯ ಪ್ರಕರಣಗಳು ವರದಿಯಾಗಿವೆ. ಇದಕ್ಕೆ ಬಹುಶಿಸ್ತೀಯ ಚಿಕಿತ್ಸಾ ವಿಧಾನದ ಅಗತ್ಯವಿದೆ’ ಎಂದು ಪುಣೆಯ ವಿಭಾಗೀಯ ಆಯುಕ್ತ ಸೌರಭ್ ರಾವ್ ಅವರು ತಿಳಿಸಿದ್ದಾರೆ.
‘ನಮ್ಮ ವಿಭಾಗೀಯ ಕಾರ್ಯಪಡೆಯ ಸದಸ್ಯ ಡಾ.ಭರತ್ ಪುರಂದರೆ ಅವರು ಕಪ್ಪುಶೀಲಿಂಧ್ರ ಪ್ರಕರಣಗಳ ನಿರ್ವಹಣೆಗೆ ವಿವರವಾದ ಪ್ರಮಾಣೀಕೃತ ಕಾರ್ಯಾಚರಣೆ ಮಾರ್ಗಸೂಚಿಗಳನ್ನು ರೂಪಿಸಿದ್ದಾರೆ. ಇದನ್ನು ಪರಿಶೀಲಿಸಲಾಗುತ್ತಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.
‘ಕಪ್ಪು ಶಿಲೀಂಧ್ರ ರೋಗವು ಅಪರೂಪದ ಶಿಲೀಂಧ್ರಗಳ ಸೋಂಕು. ಕೋವಿಡ್–19ಗಿಂತ ಮೊದಲು ನಾವು ಅಂತಹ ಅಪರೂಪದ ಪ್ರಕರಣಗಳನ್ನು ನೋಡಿದ್ದೆವು. ಆದರೆ, ಅವುಗಳ ಸಂಖ್ಯೆ ತೀರಾ ಕಡಿಮೆ ಇತ್ತು. ಕೋವಿಡ್ನ ಮೊದಲ ಅಲೆಯಲ್ಲಿ ಇಂತಹ ನಾಲ್ಕೈದು ಪ್ರಕರಣಗಳನ್ನು ಮಾತ್ರ ನೋಡಿದ್ದೆವು. ಆದರೆ, ಎರಡನೇ ಅಲೆಯಲ್ಲಿ ಇಂಥ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಿವೆ’ ಎಂದು ನೋಬಲ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಡಾ. ಅಭಿಷೇಕ್ ಘೋಷ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.