ನವದೆಹಲಿ: ‘ವರ್ಚುವಲ್ ವಿಚಾರಣೆ‘ಯಲ್ಲಿ ತಾಂತ್ರಿಕ ಅಡಚಣೆ ಎದುರಾಗಿರುವುದರಿಂದ ‘ಕೋವಿಡ್ 19 ನಿರ್ವಹಣೆ‘ ಕುರಿತು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣದ ವಿಚಾರಣೆಯನ್ನು ಮೇ 13ಕ್ಕೆ ಮುಂದೂಡಿರುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಭಾನುವಾರ ರಾತ್ರಿ ಅಫಿಡವಿಟ್ ಸಲ್ಲಿಸಿದೆ. ಅದನ್ನು ಪರಿಶೀಲಿಸಿ, ವಿಚಾರಣೆ ನಡೆಸುವುದಕ್ಕೆ ಸಮಯ ಹಿಡಿಯುತ್ತದೆ. ಈಗ ವರ್ಚುವಲ್ ವಿಚಾರಣೆಯಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿರುವ ಕಾರಣ, ಈ ವಿಚಾರಣೆಯನ್ನು ಮುಂದೂಡಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಎಲ್.ಎನ್.ರಾವ್ ಮತ್ತು ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
‘ನಮ್ಮ ಸರ್ವರ್ ಇಂದು ಡೌನ್ ಆಗಿದೆ. ಈ ಕುರಿತು ನ್ಯಾಯಮೂರ್ತಿಗಳು ಚರ್ಚೆ ನಡೆಸಿದ್ದೇವೆ. ಗುರುವಾರ ಈ ವಿಷಯವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ‘ ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಮೂರ್ತಿಗಳು ಕೇಂದ್ರ ಸಲ್ಲಿಸಿದ್ದ ಅಫಿಡವಿಟ್ ಅನ್ನು ಪರಿಶೀಲಿಸುತ್ತಾರೆ. ಈ ಪ್ರಮಾಣ ಪತ್ರದ ಬಗ್ಗೆ ಅಮಿಕಸ್ ಕ್ಯೂರಿಯವರ ಪ್ರತಿಕ್ರಿಯೆ ಅಗತ್ಯವಿದೆ. ಅವರು ಕೂಡ ಇದನ್ನು ಪರಿಶೀಲಿಸಬೇಕು‘ ಎಂದು ನ್ಯಾಯಮೂರ್ತಿ ಭಟ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.