ADVERTISEMENT

ಆಮ್ಲಜನಕ ಕೊರತೆಯಿಂದ ಸಾವು: ಆಡಿಟ್‌ಗೆ ಸಂಸತ್ತಿನ ಆರೋಗ್ಯ ಸ್ಥಾಯಿ ಸಮಿತಿ ಶಿಫಾರಸು

ಪಿಟಿಐ
Published 13 ಸೆಪ್ಟೆಂಬರ್ 2022, 19:29 IST
Last Updated 13 ಸೆಪ್ಟೆಂಬರ್ 2022, 19:29 IST
ಕೋವಿಡ್ – ಸಾಂದರ್ಭಿಕ ಚಿತ್ರ
ಕೋವಿಡ್ – ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌ನಿಂದಾಗಿ ಅದರಲ್ಲೂ ವಿಶೇಷವಾಗಿ ಎರಡನೇ ಅಲೆಯ ಅವಧಿಯಲ್ಲಿ ಆಮ್ಲಜನಕ ಕೊರತೆಯಿಂದ ಎಷ್ಟು ಜನರು ಮೃತರಾಗಿದ್ದಾರೆ ಎಂಬ ಬಗ್ಗೆ ಲೆಕ್ಕ ಪರಿಶೋಧನೆ ನಡೆಸಬೇಕು ಎಂದು ಸಂಸತ್ತಿನ ಆರೋಗ್ಯ ಸ್ಥಾಯಿ ಸಮಿತಿಯು ಕೇಂದ್ರಆರೋಗ್ಯ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಕೋವಿಡ್‌ ಸಾವುಗಳ ದೃಢವಾದ ದಾಖಲೆ ಸಿದ್ಧಪಡಿಸಲು ರಾಜ್ಯಗಳ ಜತೆಗೆ ಸಮನ್ವಯದಿಂದ ಈ ಕೆಲಸ ಆಗಬೇಕು ಎಂದಿದೆ.

ಆಮ್ಲಜನಕದ ಕೊರತೆಯಿಂದ ಯಾರೂ ಸತ್ತಿಲ್ಲ ಎಂದು ಸಚಿವಾಲಯ ಹೇಳಿರುವುದು ದುರದೃಷ್ಟಕರ ಮತ್ತು ಕಳವಳಕಾರಿ ಎಂದೂ ಸಮಿತಿಯು
ಅಭಿಪ್ರಾಯಪಟ್ಟಿದೆ.

ಆಮ್ಲಜನಕ ಕೊರತೆಯಿಂದ ಯಾರೆಲ್ಲ ಮೃತಪಟ್ಟಿದ್ದಾರೆ ಎಂಬುದನ್ನು ನಿಖರವಾಗಿ ಪರಿಶೀಲಿಸಬೇಕು. ಸಂತ್ರಸ್ತರ ಕುಟುಂಬಗಳಿಗೆ ಅಗತ್ಯ ಪರಿಹಾರ ನೀಡಬೇಕು. ಸರ್ಕಾರದ ಸಂಸ್ಥೆಗಳು ಈ ವಿಚಾರದಲ್ಲಿ ಹೆಚ್ಚು ಪಾರದರ್ಶಕವಾಗಿ ಮತ್ತು ಹೊಣೆಗಾರಿಕೆಯಿಂದ ಕೆಲಸ ಮಾಡುವುದನ್ನು ನಿರೀಕ್ಷಿಸುವುದಾಗಿಯೂ ವರದಿಯಲ್ಲಿ ಹೇಳಲಾಗಿದೆ.

ADVERTISEMENT

ರೋಗಿಗಳ ಕುಟುಂಬದ ಸದಸ್ಯರು ಆಮ್ಲಜನಕ ಸಿಲಿಂಡರ್‌ಗಾಗಿ ಗೋಗರೆದ ಮತ್ತು ಸರತಿ ಸಾಲಿನಲ್ಲಿ ನಿಂತ ಹಲವು ಉದಾಹರಣೆಗಳು ಇವೆ. ಹಾಗೆಯೇ ಆಸ್ಪತ್ರೆಗಳಲ್ಲಿ ಆಮ್ಲಜನಕ ಖಾಲಿಯಾದ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ. ಜೀವರಕ್ಷಕ ಆಮ್ಲಜನಕ ದೊರೆಯದೆ ಜನರು ಹತಾಶರಾಗಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ. ರಾಜ್ಯಸಭೆಗೆ ವರದಿಯನ್ನು ಸೋಮ ವಾರ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.