ನವದೆಹಲಿ: ಮೇ 13ರಂದು ನಡೆದ ವಿಶ್ವವಿದ್ಯಾಲಯ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಯುಇಟಿ) ಆರು ನಿಮಿಷ ತಡವಾಗಿ ತೆರಳಿದ್ದ ತನಗೆ ಪರಿಹಾರ ನೀಡುವಂತೆ ಕೋರಿ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ.
‘ಪ್ರತಿ ಪರೀಕ್ಷೆಗೂ ತನ್ನದೇ ಆದ ಪಾವಿತ್ರ್ಯ ಹಾಗೂ ಶಿಸ್ತು ಇರುತ್ತದೆ’ ಎಂದು ಹೇಳುವ ಮೂಲಕ ವಿದ್ಯಾರ್ಥಿನಿಗೆ ಪರಿಹಾರ ನೀಡಲು ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಹಾಗೂ ರಜನೀಶಕುಮಾರ್ ಗುಪ್ತಾ ಅವರು ಇದ್ದ ನ್ಯಾಯಪೀಠ, 18 ವರ್ಷದ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿತು.
‘ಪರೀಕ್ಷಾ ಕೇಂದ್ರವನ್ನು ಬೆಳಿಗ್ಗೆ 8.36ಕ್ಕೆ ತಲುಪಿದೆ. ನಿಗದಿತ ಸಮಯಕ್ಕಿಂತ ಆರು ನಿಮಿಷ ತಡವಾಗಿ ತಲುಪಿದ್ದರಿಂದ ನನಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನಿರಾಕರಿಸಲಾಯಿತು’ ಎಂದು ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ನ ಏಕಸದಸ್ಯ ಪೀಠ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ, ಆಕೆ ದ್ವಿಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ, ‘ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್ಟಿಎ) ತನ್ನ ಕೈಪಿಡಿಯಲ್ಲಿ, ಅಭ್ಯರ್ಥಿಗಳಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಿದೆ. ಬೆಳಿಗ್ಗೆ 8.30ಕ್ಕೆ ಪರೀಕ್ಷಾ ಕೇಂದ್ರದ ದ್ವಾರಗಳನ್ನು ಮುಚ್ಚಲಾಗುವ ಕಾರಣ, ಬೆಳಿಗ್ಗೆ 7ರ ಹೊತ್ತಿಗೆ ಪರೀಕ್ಷಾ ಕೇಂದ್ರ ತಲುಪಿರಬೇಕು ಎಂದು ಕೈಪಿಡಿಯಲ್ಲಿ ಸೂಚಿಸಲಾಗಿದೆ’ ಎಂದು ಪೀಠ ಹೇಳಿದೆ.
‘ವ್ಯಾಪಕವಾಗಿ ನಡೆಯುವ ಇಂತಹ ಪರೀಕ್ಷೆ ವಿಚಾರದಲ್ಲಿ ಉದಾರತೆ ತೋರಿದಲ್ಲಿ ಅದು ಗೊಂದಲಕ್ಕೆ ಕಾರಣವಾಗುತ್ತದೆ. ಪರೀಕ್ಷೆಗೆ ಸಂಬಂಧಿಸಿದ ಶಿಸ್ತನ್ನು ಪ್ರತಿಯೊಬ್ಬರು ಪಾಲಿಸಲೇಬೇಕು’ ಎಂದು ಪೀಠ ಹೇಳಿದೆ.
‘ಕೇವಲ ಆರು ನಿಮಿಷಗಳಷ್ಟು ತಡವಾಗಿದೆ ಎಂದು ನಿಮಗೆ ಅನಿಸಬಹುದು. ವೇಳಾಪಟ್ಟಿಯಂತೆ ಪ್ರವೇಶ ದ್ವಾರಗಳನ್ನು ಬಂದ್ ಮಾಡಿದ್ದಕ್ಕಾಗಿ ಅಧಿಕಾರಿಗಳನ್ನು ದೂಷಿಸಲಾಗದು. ಅಲ್ಲದೇ, ತನಗೆ ಪಕ್ಷಪಾತ ಮಾಡಲಾಗಿದೆ ಎಂಬುದು ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಕ್ಕೆ ಸಕಾರಣವೂ ಆಗದು’ ಎಂದು ಹೇಳುವ ಮೂಲಕ ಪೀಠವು ವಿದ್ಯಾರ್ಥಿನಿಯ ಅರ್ಜಿಯನ್ನು ವಜಾಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.