ಕೋಲ್ಕತ್ತ: ಮೋಚಾ ಚಂಡಮಾರುತದ ಸಂಭವನೀಯ ವಿನಾಶ ತಗ್ಗಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಶ್ಚಿಮ ಬಂಗಾಳ ಸರ್ಕಾರ ತೆಗೆದುಕೊಂಡಿದೆ. ಅಲ್ಲದೆ, ಕರಾವಳಿ ತೀರದ ಮತ್ತು ತಗ್ಗುಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಶುಕ್ರವಾರದಿಂದ ಮೂರು ದಿನ ಸಮುದ್ರಕ್ಕೆ ಇಳಿಯದಂತೆ ಮೀನುಗಾರರು ಮತ್ತು ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ.
ಪಶ್ಚಿಮ ಬಂಗಾಳದ ಸುಂದರಬನದ ಕೆಲವು ಪ್ರದೇಶಗಳು, ದಕ್ಷಿಣ 24 ಪರಗಣ ಜಿಲ್ಲೆ ಮತ್ತು ಪುರ್ಬಾ ಮೇದಿನಿಪುರದ ಕರಾವಳಿಯ ತಗ್ಗು ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸುರಕ್ಷಿತ ಸ್ಥಳದಲ್ಲಿ ತೆರೆದಿರುವ ಆಸರೆ ಕೇಂದ್ರಗಳಿಗೆ ಕುಡಿಯುವ ನೀರು, ಹಾಲಿನ ಪುಡಿ, ಆಹಾರ ಮತ್ತು ಔಷಧಗಳನ್ನು ಪೂರೈಸಲಾಗಿದೆ. ಅಲ್ಲದೆ, ಈ ಪ್ರದೇಶಗಳಿಗೆ ಸಾಕಷ್ಟು ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೆಚ್ಚು ಪ್ರವಾಸಿಗರು ಭೇಟಿ ನೀಡುವ ದಿಘಾ, ಶಂಕರಾಪುರ, ಬಖ್ಖಾಳಿ ಪ್ರದೇಶಗಳಿಗೆ ಈಗಾಗಲೇ ವಿಪತ್ತು ನಿರ್ವಹಣಾ ತಂಡಗಳು, ಸ್ವಯಂ ಸೇವಕರು ತಲುಪಿದ್ದಾರೆ. ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ (ಎನ್ಡಿಆರ್ಎಫ್) ಶೋಧನೆ ಮತ್ತು ರಕ್ಷಣೆಯ ಎಂಟು ತುಕಡಿಗಳು ಗುರುವಾರ ರಾತ್ರಿಯೇ ತಲುಪಿವೆ ಎಂದು ಅವರು ತಿಳಿಸಿದ್ದಾರೆ.
ಮೋಚಾ ಚಂಡಮಾರುತವು ಭಾನುವಾರದ ವೇಳೆಗೆ ಬಾಂಗ್ಲಾದೇಶ-ಮ್ಯಾನ್ಮಾರ್ ಗಡಿಯನ್ನೂ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.