
ಹೈದರಾಬಾದ್: ಮೊಂಥಾ ಚಂಡಮಾರುತದ ಅಬ್ಬರಕ್ಕೆ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ತತ್ತರಿಸಿವೆ. ಮೊಂಥಾ ಚಂಡಮಾರುತದ ಪ್ರಭಾವದಿಂದಾಗಿ ಬುಧವಾರ ತೆಲಂಗಾಣದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಿದೆ. 12 ಜಿಲ್ಲೆಗಳಲ್ಲಿ 4.47 ಲಕ್ಷ ಎಕರೆ ಬೆಳೆ ಹಾನಿಯಾಗಿದೆ ಎಂದು ಪ್ರಾಥಮಿಕ ಅಂದಾಜು ಮಾಡಲಾಗಿದೆ ಎಂದು ಕೃಷಿ ಸಚಿವ ತುಮ್ಮಲ ನಾಗೇಶ್ವರ್ ರಾವ್ ಹೇಳಿದ್ದಾರೆ.
ಪ್ರಾಥಮಿಕ ವರದಿಯನ್ನು ಸಿದ್ಧಪಡಿಸಿರುವ ಕೃಷಿ ಇಲಾಖೆ, 12 ಜಿಲ್ಲೆಗಳನ್ನು ಒಳಗೊಂಡ 179 ಮಂಡಲಗಳಲ್ಲಿ 2,53,033 ರೈತರಿಗೆ ಸೇರಿದ 4,47,864 ಎಕರೆ ಬೆಳೆ ಹಾನಿಯಾಗಿದೆ ಎಂದು ತಿಳಿಸಿದೆ.
ಸಮೀಕ್ಷೆ ಪೂರ್ಣಗೊಂಡ ನಂತರ ಬೆಳೆ ನಷ್ಟ ಹೆಚ್ಚಾಗಬಹುದು ಎಂದು ಸಚಿವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಾಥಮಿಕ ವರದಿಯ ಪ್ರಕಾರ, 2,82,379 ಎಕರೆಯಲ್ಲಿ ಭತ್ತ ಮತ್ತು 1,51,707 ಎಕರೆಯಲ್ಲಿ ಹತ್ತಿ ಹಾನಿಯಾಗಿದೆ.
ವಾರಂಗಲ್ ಜಿಲ್ಲೆಯಲ್ಲಿ 1,30,200 ಎಕರೆಯಷ್ಟು ಗರಿಷ್ಠ ಬೆಳೆ ನಷ್ಟ ವರದಿಯಾಗಿದ್ದು, ನಂತರ ಖಮ್ಮಂ ಜಿಲ್ಲೆಯಲ್ಲಿ 62,400 ಎಕರೆ ಮತ್ತು ನಲ್ಗೊಂಡ ಜಿಲ್ಲೆಯಲ್ಲಿ 52,071 ಎಕರೆ ಬೆಳೆ ನಷ್ಟವಾಗಿದೆ.
ಮೊಂಥಾ ಚಂಡಮಾರುತದಿಂದ ನಷ್ಟ ಅನುಭವಿಸಿದ ಪ್ರತಿಯೊಬ್ಬ ರೈತರ ರಕ್ಷಣೆಗೆ ಸರ್ಕಾರ ಮುಂದಾಗಲಿದೆ ಎಂದು ರಾವ್ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.