ಲಖನೌ: ಹದಿಹರೆಯದ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಯುವಕರ ವಿರುದ್ಧ ಅವರ ಕುಟುಂಬಗಳಿಗೆ ದೂರು ನೀಡಿದ್ದ ದಲಿತ ಯುವತಿಯ ತಾಯಿಯನ್ನು ತೀವ್ರವಾಗಿ ಥಳಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಆಕೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗ್ರಾಜ್ ಜಿಲ್ಲೆಯ ಬುವಾಪುರ್ ಗ್ರಾಮದಲ್ಲಿ ನಡೆದಿದೆ.
‘ಬುವಾಪುರ್ ಗ್ರಾಮದಲ್ಲಿನ ದಲಿತ ಯುವತಿ ಬುಧವಾರ ತಮ್ಮ ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತವಾಗಿದ್ದಾಗ ಅದೇ ಗ್ರಾಮದ ನಿವಾಸಿಗಳಾದ ಮೂವರು ಯುವಕರು, ಯುವತಿಯ ಬಟ್ಟೆಗಳನ್ನು ಹರಿದು ಅತ್ಯಾಚಾರಕ್ಕೆ ಯತ್ನಿಸಿದ್ದರು. ಆದರೆ, ಯುವಕರಿಂದ ಪಾರಾಗಿ ಬಂದ ಯುವತಿ ಮನೆಗೆ ಓಡಿಹೋಗಿ ತನ್ನ ತಾಯಿಗೆ ವಿಷಯ ತಿಳಿಸಿದ್ದಳು’ ಎಂದು ಪೊಲೀಸರು ಹೇಳಿದ್ದಾರೆ.
‘ಯುವತಿಯ ತಾಯಿ, ಮೂವರು ಯುವಕರ ಮನೆಗಳಿಗೆ ತೆರಳಿ ಅವರ ಪೋಷಕರಿಗೆ ದೂರಿದ್ದರು. ಇದರಿಂದ ಕುಪಿತಗೊಂಡಿದ್ದ ಯುವಕರು, ಯುವತಿಯ ತಾಯಿಯನ್ನು ಸಾಯುವಂತೆ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಆಕೆ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಗೆ ಕಾರಣರಾದ ಯುವಕರನ್ನು ಅಮನ್, ತಾಲಿಬ್ ಮತ್ತು ಕೌಶಲ್ ಎಂದು ಗುರುತಿಸಲಾಗಿದ್ದು ಅವರನ್ನು ಬಂಧಿಸಲಾಗಿದೆ. ಘಟನೆಯ ನಂತರ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಪೊಲೀಸರನ್ನು ನಿಯೋಜಿಸಲಾಗಿದೆ. ಘಟನೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇರೆಗೆ ಮೌಯಿಮಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.