ನವದೆಹಲಿ: ‘ಪದ್ಮಶ್ರೀ‘ ಪುರಸ್ಕೃತ ಖ್ಯಾತ ನೃತ್ಯ ವಿಮರ್ಶಕ, ಸಂಶೋಧಕ ಸುನಿಲ್ ಕೊಠಾರಿ (87) ಅವರು ಭಾನುವಾರ ಹೃದಯಾಘಾತದಿಂದ ಇಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು.
ಸುನಿಲ್ ಅವರಿಗೆ ತಿಂಗಳ ಹಿಂದೆ ಕೋವಿಡ್-19 ಸೋಂಕು ದೃಢಪಟ್ಟಿತ್ತು. ನಂತರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ನಂತರವೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಅವರ ಕುಟುಂಬದ ಆಪ್ತ ವಿಧಾ ಲಾಲ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇಲ್ಲಿನ ಏಷ್ಯನ್ ಗೇಮ್ಸ್ ವಿಲೇಜ್ನಲ್ಲಿರುವ ತಮ್ಮ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದ ಸುನೀಲ್ ಅವರಿಗೆ ಭಾನುವಾರ ಮುಂಜಾನೆ ಹೃದಯಘಾತವಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ವಿಧಾ ತಿಳಿಸಿದ್ದಾರೆ.
ಡಿಸೆಂಬರ್ 20, 1933 ರಂದು ಮುಂಬೈನಲ್ಲಿ ಜನಿಸಿದ ಕೊಠಾರಿ, ಭಾರತೀಯ ನೃತ್ಯ ಪ್ರಕಾರಗಳ ಅಧ್ಯಯನ ಆರಂಭಿಸುವ ಮುನ್ನ ಚಾರ್ಟೆಂಡ್ ಅಕೌಂಟ್ ಆಗಿದ್ದರು.
ಕೊಠಾರಿ ಅಸ್ಸಾಂನ ಸತ್ಯ ನೃತ್ಯಗಳು, ಭಾರತೀಯ ನೃತ್ಯದಲ್ಲಿ ಹೊಸ ನಿರ್ದೇಶನಗಳು, ಭರತನಾಟ್ಯಂ, ಒಡಿಸ್ಸಿ, ಚೌ, ಕಥಕ್, ಕೂಚುಪುಡಿಮತ್ತು ಉದಯ್ ಶಂಕರ್ ಮತ್ತು ರುಕ್ಮಿಣಿ ದೇವಿ ಅರುಂಡೇಲ್ ಅವರ ಜೀವನಚರಿತ್ರೆ ಸೇರಿದಂತೆ ಭಾರತೀಯ ನೃತ್ಯ ಪ್ರಕಾರಗಳ ವಿಷಯದ ಬಗ್ಗೆ 20ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
ಕೊಠಾರಿ ಅವರ ಸಾಧನೆಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1995) ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿದೆ. ಗುಜರಾತ್ ಸಂಗೀತ ನಾಟಕ ಅಕಾಡೆಮಿ ಗೌರವ ಪುರಸ್ಕಾರ(2000), ಭಾರತ ಸರ್ಕಾರದ ಪದ್ಮಶ್ರೀ (2001); ಮತ್ತು ನ್ಯೂಯಾರ್ಕ್, ಅಮೆರಿಕದ ನೃತ್ಯ ವಿಮರ್ಶಕರ ಸಂಘದ ಲೈಫ್ ಟೈಮ್ ಅಚೀವ್ಮೆಂಟ್ ಪುರಸ್ಕಾರ (2011) ಕ್ಕೆ ಭಾಜನರಾಗಿದ್ದರು. ಜತೆಗೆ ಭಾರತೀಯ ನೃತ್ಯಕ್ಕೆ ನೀಡಿದ ಕೊಡುಗೆಗಾಗಿ ಸುನೀಲ್ ಅವರು ಸಂಗೀತ ನಾಟಕ ಅಕಾಡೆಮಿಯ ಚುನಾಯಿತ ಪ್ರತಿನಿಧಿಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.