ತಿರುವನಂತಪುರ: ತಾಯಿಗೆ ಮರಳಿ ಜೀವ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಮಗಳೊಬ್ಬಳು ಮೃತದೇಹದ ಮುಂದೆ ಮೂರು ದಿನ ಕಳೆದ ಘಟನೆ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ.
ನಿವೃತ್ತ ಶಾಲಾ ಶಿಕ್ಷಕಿ ಒಮಾನಾ (72) ಮೃತಪಟ್ಟವರು. ಅವರ ಮಗಳು ಕವಿತಾ (42)ಹೋಮಿಯೋಪಥಿ ವೈದ್ಯೆಯಾಗಿದ್ದು, ತಾಯಿ ತೀರಿಹೋದ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ.
‘ಒಮಾನಾ ಅವರು ಕಳೆದ ಭಾನುವಾರ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಕವಿತಾ ಅವರು ತಾಯಿಗೆ ಜೀವ ನೀಡುವಂತೆ ದೇವರಲ್ಲಿ ಸತತವಾಗಿ ಮೂರು ದಿನ ಪ್ರಾರ್ಥನೆ ಸಲ್ಲಿಸಿದ್ದಾರೆ. ಆದರೆ, ಮರಳಿ ಜೀವ ಬಾರದಿದ್ದಾಗ ಭರವಸೆ ಕಳೆದುಕೊಂಡು ನೆರೆಹೊರೆಯವರಿಗೆ ತಾಯಿ ತೀರಿಹೋದ ವಿಷಯ ತಿಳಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಕವಿತಾ ಅವರು ತಾಯಿಯ ಸಾವಿನಿಂದ ಮಾನಸಿಕವಾಗಿ ಕುಗ್ಗಿ ಹೋಗಿರಬಹುದು. ಬಹಳ ವರ್ಷಗಳ ಹಿಂದೆಯೇ ಅವರ ತಂದೆ ಸಾವನ್ನಪ್ಪಿದ್ದಾರೆ.ಅಮ್ಮನ ಹೊರತಾಗಿ ಅವರಿಗೆ ಬೇರೆ ಯಾರೂ ಇರಲಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.