ನವದೆಹಲಿ: ಇಲ್ಲಿನ ಅಪಾರ್ಟ್ಮೆಂಟ್ವೊಂದರಲ್ಲಿ ಮೂವರು ಮಹಿಳೆಯರು ವಿಷಾನಿಲ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ.
ವಸಂತ್ ವಿಹಾರ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಮಂಜುಳ (50) ಅವರ ಪುತ್ರಿಯರಾದ ಅಸ್ಮಿಕಾ (27), ಅಂಜು (26) ಮೃತಪಟ್ಟಿದ್ದಾರೆ. ಅವರ ಮೃತದೇಹಗಳ ಬಳಿ ಡೆತ್ ನೋಟ್ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಂತ ಫ್ಲಾಟ್ ಹೊಂದಿದ್ದ ಮಂಜುಳ ಅವರ ಪತಿ ಕಳೆದ ವರ್ಷ ಕೋವಿಡ್ನಿಂದ ಮೃತಪಟ್ಟಿದ್ದರು. ಇದರಿಂದಾಗಿ ಮಂಜುಳ ಮತ್ತು ಪುತ್ರಿಯರು ಖಿನ್ನತೆಗೆ ಒಳಗಾಗಿದ್ದರು. ಮಂಜುಳ ಸಹ ಎರಡು ತಿಂಗಳಿಂದ ಹಾಸಿಗೆ ಹಿಡಿದಿದ್ದರು ಎಂದು ನೆರೆ ಹೊರೆಯವರು ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆಗಾಗಿ ಗ್ಯಾಸ್ ಲೀಕ್...
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿ ಅವರು ಗ್ಯಾಸ್ ಸಿಲಿಂಡ್ ಆನ್ ಮಾಡಿದ್ದರು. ಕಿಟಕಿ, ಬಾಗಿಲುಗಳಿಗೆ ಗ್ಯಾಸ್ ಹೊರ ಹೋಗದಂತೆ ಟೇಪ್ ಅಂಟಿಸಿದ್ದರು. ಮನೆಯನ್ನು ತುಂಬಿಕೊಂಡಿದ್ದ ಕಾರ್ಬನ್ ಮಾನಾಕ್ಸೈಡ್ ಸೇವಿಸಿ ಮೃತಪಟ್ಟಿದ್ದಾರೆ. ಒಂದೇ ರೂಮಿನಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ. ಹಾಗೂ ಅದೇ ರೂಮಿನಲ್ಲಿ ಅಗ್ನಿಕುಂಡ, ಕ್ಯಾಂಡಲ್ಗಳು ಪತ್ತೆಯಾಗಿವೆ.
ನೆರೆ ಹೊರೆಯವರು ಮತ್ತು ಪೊಲೀಸರು ಮನೆಯೊಳಗೆ ಪ್ರವೇಶಿಸಿದಾಗ ಗ್ಯಾಸ್ ಹಬ್ಬಿಕೊಂಡಿರುವುದರಿಂದ ಬೆಂಕಿಕಡ್ಡಿ ಅಥವಾ ಲೈಟರ್ಗಳನ್ನು ಬಳಸಬೇಡಿ ಎಂದು ಡೆತ್ ನೋಟ್ನಲ್ಲಿ ಬರೆಯಲಾಗಿತ್ತು.
ಆತ್ಮಹತ್ಯೆಗಾಗಿಯೇ ಅವರು ಆನ್ಲೈನ್ ಮೂಲಕ ಅಗ್ನಿಕುಂಡ ಹಾಗೂ ಕಲ್ಲಿದ್ದಲು ತರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.