ಆಲಿಗಡ: ಇಲ್ಲಿ ನಡೆದಿದ್ದ ಕಳ್ಳಭಟ್ಟಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ 22ಕ್ಕೆ ಏರಿದ್ದು, ಇನ್ನೂ 28 ಜನರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶುಕ್ರವಾರ 7 ಮಂದಿ ಮೃತಪಟ್ಟಿದ್ದರು. ಗಂಭೀರ ಸ್ಥಿತಿಯಲ್ಲಿ ಇರುವವರು ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜು, ಎಎಂಯು, ಮಲ್ಖನ್ ಸಿಂಗ್ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿವಿಧ ಗ್ರಾಮಗಳಿಂದಲೂ ಪ್ರಕರಣ ವರದಿಯಾಗುತ್ತಿದ್ದು, ಮೃತರ ಸಂಖ್ಯೆ ಹೆಚ್ಚಬಹುದು ಎಂದು ತಿಳಿಸಿದ್ದಾರೆ.
ಕಳ್ಳಭಟ್ಟಿ ಮಾರಾಟ ಜಾಲದ ಪ್ರಮುಖ ಆರೋಪಿ ಅನಿಲ್ ಚೌಧುರಿ ಸೇರಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಮೂರು ಪ್ರಕರಣ ಸಂಬಂಧ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದು, ಅಬಕಾರಿ ಇಲಾಖೆಯ ಐವರನ್ನು ಅಮಾನತುಪಡಿಸಲಾಗಿದೆ.
ಮುಖ್ಯ ಆರೋಪಿಗಳು ಎನ್ನಲಾದ ರಿಷಿ ಶರ್ಮಾ, ವಿಪಿನ್ ಯಾದವ್, ಅನಿಲ್ ಚೌಧುರಿ ಕುರಿತು ಸುಳಿವು ನೀಡಿದವರಿಗೆ ಪೊಲೀಸರು ₹ 50 ಸಾವಿರ ಬಹುಮಾನ ಘೋಷಿಸಿದ್ದರು. ಈ ಪೈಕಿ ಅನಿಲ್ ಮತ್ತು ರಿಷಿಶರ್ಮಾ ಅವರಿಗೆ ರಾಜಕೀಯವಾಗಿ ಪ್ರಭಾವಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.