ಲಖನೌ: ಪ್ರತಿ ತಿಂಗಳ 30ರಂದು ಹಾಥರಸ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಸ್ಮರಣೆಯ ದಿನವಾಗಿ ಆಚರಿಸಬೇಕು. ಈ ಮೂಲಕ ಬಿಜೆಪಿಯ ದಲಿತ ಹಾಗೂ ಮಹಿಳಾ ವಿರೋಧಿ ನಿಲುವನ್ನು ಬಹಿರಂಗಪಡಿಸಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗುರುವಾರ ಹೇಳಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 14ರಂದು ಹಾಥರಸ್ನ ಗ್ರಾಮವೊಂದರಲ್ಲಿ 19 ವರ್ಷದ ಮಹಿಳೆಯೊಬ್ಬರು ನಾಲ್ವರು ಪುರುಷರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ದೆಹಲಿಯ ಸಫ್ದರ್ಗಂಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹದಿನೈದು ದಿನಗಳ ನಂತರದಲ್ಲಿ ಮಹಿಳೆ ಕೊನೆಯುಸಿರೆಳೆದಿದ್ದರು.
ಪೊಲೀಸರು ಬಲವಂತವಾಗಿ ಮಹಿಳೆಯ ಮೃತದೇಹವನ್ನು ತೆಗೆದುಕೊಂಡು ಹೋಗಿ ಮಧ್ಯರಾತ್ರಿ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಸಂತ್ರಸ್ತೆಯ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆರೋಪಿಸಿದ್ದರು.
‘ಬಿಜೆಪಿ ರಾಜ್ಯದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಅಮಾನವೀಯ ಕೃತ್ಯ ನೆನಪಿಸಲು ಪ್ರತಿ ತಿಂಗಳ 30ನೇ ತಾರೀಖಿನಂದು ‘ಹಾಥರಸ್ ಸಂತ್ರಸ್ತೆಯ ಸ್ಮರಣ ದಿನ’ವಾಗಿ ಆಚರಿಸುವಂತೆ ಉತ್ತರ ಪ್ರದೇಶದ ನಿವಾಸಿಗಳು, ಎಸ್ಪಿ ಮತ್ತು ಅದರ ಮಿತ್ರ ಪಕ್ಷಗಳಲ್ಲಿ ಮನವಿ ಮಾಡುತ್ತೇನೆ’ ಎಂದು ಅಖಿಲೇಶ್ ಯಾದವ್ ಟ್ವೀಟ್ನಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.