
ಆಟೊ ರಿಕ್ಷಾ ಚಾಲಕ ಮೊಹಮ್ಮದ್ ಜುಮಾನ್ ಮೃತದೇಹ ಕಂಡು ಕಣ್ಣೀರಾದ ಕುಟುಂಬ
ಪಿಟಿಐ ಚಿತ್ರ
ನವದೆಹಲಿ: ‘ನನ್ನ ಅಣ್ಣನ ಮೊಬೈಲ್ ಜಿಪಿಎಸ್ ಲೊಕೇಶನ್ ಸಕ್ರಿಯವಾಗಿತ್ತು, ಅದರಲ್ಲಿ ಅವನಿದ್ದ ಕೊನೆಯ ಜಾಗ ಕೆಂಪು ಕೋಟೆ ಬಳಿ ತೋರಿಸುತ್ತಿತ್ತು. ತಕ್ಷಣ ಅಲ್ಲಿಗೆ ಹೋದಾಗ ಆತ ಮೃತಪಟ್ಟಿರುವುದು ಗೊತ್ತಾಯಿತು. ಆದರೆ ಅಲ್ಲಿ ತಲೆ, ಕೈ, ಕಾಲುಗಳು ಎಲ್ಲವೂ ಛಿದ್ರವಾಗಿತ್ತು. ಛಿದ್ರವಾಗಿ ಬಿದ್ದಿದ್ದ ದೇಹದ ಮೇಲೆ ಇರುವ ಬಟ್ಟೆಯನ್ನು ನೋಡಿ ಅವರನ ಗುರುತು ಪತ್ತೆ ಮಾಡಿದೆವು’.. ಹೀಗೆ ದೆಹಲಿಯಲ್ಲಿ ನಡೆದ ಕಾರು ಸ್ಫೋಟದಲ್ಲಿ ಮೃತಪಟ್ಟ ಮೊಹಮ್ಮದ್ ಜುಮಾನ್ ಎನ್ನುವವರ ತಂಗಿ ಅಣ್ಣನನ್ನು ಕಳೆದುಕೊಂಡ ದುಃಖ ತೋಡಿಕೊಂಡಿದ್ದಾಳೆ.
ಸ್ಫೋಟದಲ್ಲಿ ಮೃತಪಟ್ಟ 12 ಜನರ ಪೈಕಿ 8 ಜನರ ಗುರುತನ್ನು ಪತ್ತೆ ಮಾಡಲಾಗಿದೆ. ಇನ್ನುಳಿದ ನಾಲ್ವರ ಮೃತದೇಹವನ್ನು ಡಿಎನ್ಎ ಪರೀಕ್ಷೆಗಾಗಿ ಸಂರಕ್ಷಿಸಲಾಗಿದೆ. ಡಿಎನ್ಎ ಪರೀಕ್ಷೆಯ ಫಲಿತಾಂಶದ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ 8 ಮಂದಿಯನ್ನು ಅಮರ್ ಕಠಾರಿಯಾ (35), ಮೊಹಮದ್ ಜುಮಾನ್ (35), ಅಶೋಕ್ ಕುಮಾರ್, (34), ಮೊಹಸಿನ್ ಮಲಿಕ್ (35), ದಿನೇಶ್ ಕುಮಾರ್ ಮಿಶ್ರಾ (35), ಲೋಕೇಶ್ ಕುಮಾರ್ ಅಗರ್ವಾಲ್ (52), ಪಂಕಜ್ ಸೈನಿ (23), ಮೊಹಮ್ಮದ್ ನುಮಾನ್ (19) ಎಂದು ಗುರುತಿಸಲಾಗಿದೆ.
ಜುಮಾನ್ ಆಟೊ ರಿಕ್ಷಾ ಚಾಲಕನಾಗಿದ್ದು, ಕುಟುಂಬದ ಆಧಾರವಾಗಿದ್ದರು. ‘ಜುಮಾನ್, ತಾಯಿ, ಅಂಗವಿಕಲ ಹೆಂಡತಿ, ಮೂವರು ಮಕ್ಕಳನ್ನು ಬಿಟ್ಟುಹೋಗಿದ್ದಾರೆ. ಜುಮಾನ್ ಪತ್ನಿ ಅಂದರೆ ನನ್ನ ಅತ್ತಿಗೆ ಹೊರಗೆ ಹೋಗಿ ದುಡಿಯಲು ಸಾಧ್ಯವಿಲ್ಲ. ಮಕ್ಕಳು ತೀರಾ ಚಿಕ್ಕವರು. ಸರ್ಕಾರ ಕೂಡ ಸಹಾಯ ಮಾಡುವ ಬಗ್ಗೆ ಏನೂ ಹೇಳಿಲ್ಲ. ಮಕ್ಕಳ ಶಿಕ್ಷಣದ ಹೊಣೆಯನ್ನು ಸರ್ಕಾರ ಹೊರಬೇಕು’ ಎಂದು ತಂಗಿ ನಜ್ಮಾ ಹೇಳಿದ್ದಾರೆ.
ಅಮರ್ ಕಠಾರಿಯಾ ಕೂಡ ಕುಟುಂಬವನ್ನು ಸಲಹುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದ ಅಮರ್ಗೆ ಮೂರು ವರ್ಷದ ಮಗುವಿದೆ. ‘ಮನೆಗೆ ಬರುತ್ತಿದ್ದೇನೆ ಎಂದು ಕರೆ ಮಾಡಿದ್ದ. ಸ್ವಲ್ಪ ಹೊತ್ತಿನ ಬಳಿಕ ಅವನ ಸಂಖ್ಯೆಗೆ ಕರೆ ಮಾಡಿದರೆ ಮಹಿಳೆಯೊಬ್ಬರು ಫೋನ್ ರಿಸೀವ್ ಮಾಡಿ , ಸ್ಫೋಟಗೊಂಡ ಕೆಂಪು ಕೋಟೆಯ ಬಳಿ ಫೋನ್ ಸಿಕ್ಕಿರುವುದಾಗಿ ಹೇಳಿದರು. ಸ್ಥಳಕ್ಕೆ ಹೋದಾಗ ಮೃತದೇಹವನ್ನು ಲೋಕ ನಾಯಕ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುವುದು ತಿಳಿಯಿತು. ಅಲ್ಲಿಗೆ ಹೋದ ಮೇಲೆ ಮಂಗಳವಾರ ಬೆಳಿಗ್ಗೆ ಮೃತದೇಹವನ್ನು ಹಸ್ತಾಂತರಿಸಿದರು’ ಎಂದು ಅಮರ್ ತಂದೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.