ADVERTISEMENT

ದೆಹಲಿಯತ್ತ ರೈತರ ಮೆರವಣಿಗೆ

ಬುರಾಡಿ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅವಕಾಶ

ಪಿಟಿಐ
Published 27 ನವೆಂಬರ್ 2020, 21:38 IST
Last Updated 27 ನವೆಂಬರ್ 2020, 21:38 IST
ದೆಹಲಿ ಸಮೀಪದ ಸಿಂಘು ಎಂಬಲ್ಲಿ ರೈತರೊಬ್ಬರ ಮೇಲೆ ಭದ್ರತಾ ಪಡೆ ಸಿಬ್ಬಂದಿ ಶುಕ್ರವಾರ ಲಾಠಿ ಪ್ರಹಾರ ನಡೆಸಿದರು –ಪಿಟಿಐ ಚಿತ್ರ
ದೆಹಲಿ ಸಮೀಪದ ಸಿಂಘು ಎಂಬಲ್ಲಿ ರೈತರೊಬ್ಬರ ಮೇಲೆ ಭದ್ರತಾ ಪಡೆ ಸಿಬ್ಬಂದಿ ಶುಕ್ರವಾರ ಲಾಠಿ ಪ್ರಹಾರ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ‘ದೆಹಲಿ ಚಲೊ’ ಪ್ರತಿಭಟನಾ ಮೆರವಣಿಗೆ ದೆಹಲಿಯನ್ನು ಪ್ರವೇಶಿಸಲು ದೆಹಲಿ ಪೊಲೀಸರು ಶುಕ್ರವಾರ ಅನುಮತಿ ನೀಡಿದ್ದಾರೆ.

ದೆಹಲಿಯ ಹೊರವಲಯದಲ್ಲಿರುವ ಬುರಾಡಿ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗಿದೆ. ದೆಹಲಿ ಗಡಿಯಿಂದ ಬುರಾಡಿ ಮೈದಾನದವರೆಗೆ ರೈತರು ಪೊಲೀಸ್ ಕಾವಲಿನಲ್ಲಿ ಮೆರವಣಿಗೆ ನಡೆಸಿದ್ದಾರೆ.

ಪ್ರತಿಭಟನೆಗೆ ಅನುಮತಿ ನೀಡಿದ್ದರೂ ಪೊಲೀಸರು ರೈತರ ಮೇಲೆ ಅಶ್ರುವಾಯು ಷೆಲ್ ಸಿಡಿಸಿದ್ದಾರೆ ಮತ್ತು ಜಲಫಿರಂಗಿ ಪ್ರಯೋಗಿಸಿದ್ದಾರೆ. ‘ಮೆರವಣಿಗೆಯಲ್ಲಿ ವಿಪರೀತ ಸಂಖ್ಯೆಯಲ್ಲಿ ಜನರು ಸೇರುವುದನ್ನು ತಡೆಯಲು ಬಲ ಪ್ರಯೋಗಿಸಬೇಕಾಯಿತು’ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ADVERTISEMENT

ಈ ಮೊದಲು ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ರೈತ ಸಂಘಟನೆಗಳು ನಿರ್ಧರಿಸಿದ್ದವು. ಪೊಲೀಸರು ಅನುಮತಿ ನಿರಾಕರಿಸಿದ್ದರು. ದೆಹಲಿ ಪ್ರವೇಶಿಸುವ ರೈತರನ್ನು ವಶಕ್ಕೆ ಪಡೆದು, ಆರು ಕ್ರೀಡಾಂಗಣಗಳಲ್ಲಿ ಬಂಧನದಲ್ಲಿ ಇರಿಸಲು ಪೊಲೀಸರು ದೆಹಲಿ ಸರ್ಕಾರದ ಅನುಮತಿ ಕೇಳಿದ್ದರು. ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರವು ಅನುಮತಿ ನಿರಾಕರಿಸಿತ್ತು.

‘ಮಾತುಕತೆಗೆ ಬನ್ನಿ’
‘ನೂತನ ಕೃಷಿ ಕಾಯ್ದೆಗಳ ಬಗ್ಗೆ ರೈತರಲ್ಲಿ ಇರುವ ಸಂದೇಹಗಳನ್ನು ಬಗೆಹರಿಸಲಾಗುವುದು. ಇದಕ್ಕಾಗಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ರೈತ ನಾಯಕರನ್ನು ಆಹ್ವಾನಿಸುತ್ತಿದ್ದೇವೆ. ಡಿಸೆಂಬರ್ 3ರಂದು ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.