ನವದೆಹಲಿ:ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನಾ ಮೆರವಣಿಗೆ ಈಗ ಐದನೇ ದಿನವನ್ನು ಪೂರೈಸಿದೆ. ರೈತರನ್ನು ದೆಹಲಿಯ ಗಡಿ ಪ್ರದೇಶದಲ್ಲಿಯೇ ನಿರ್ಬಂಧಿಸಲಾಗಿದ್ದು, ಪಂಜಾಬಿನ ಸಾವಿರಾರು ರೈತರು ಗುರುನಾನಕ್ ಅವರ 551ನೇ ಜನ್ಮದಿನ ಆಚರಿಸಿ ರಕ್ಷಣಾ ಸಿಬ್ಬಂದಿಗೆ ಪ್ರಸಾದ ವಿತರಿಸಿದ್ದಾರೆ.
ಕೇಂದ್ರ ಸರ್ಕಾರದ ಷರತ್ತಿನಂತೆ ದೆಹಲಿಯ ಬುರಾಡಿ ಮೈದಾನಕ್ಕೆ ತೆರಳಲು ನಿರಾಕರಿಸಿರುವ ರೈತರು, ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಯಲ್ಲೇ ಪ್ರತಿಭಟನೆ ಮುಂದುವರಿಸಿದ್ದಾರೆ. ಹೀಗಾಗಿ ಸಿಖ್ ರೈತರು ಈ ಪ್ರದೇಶದಲ್ಲಿಯೇ ಪ್ರಸಾದ ಸಿದ್ಧಪಡಿಸಿ ಹಂಚಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊಗಳು, ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಗಡಿಯಲ್ಲಿ ಸಾವಿರಾರು ರೈತರು ಈಗಾಗಲೇ ಜಮಾಯಿಸಿದ್ದಾರೆ. ಹರಿಯಾಣದಿಂದ ಇನ್ನೂ ಸಾವಿರಾರು ರೈತರು ಬರುತ್ತಿದ್ದಾರೆ. ಇಲ್ಲಿಗೆ ಬಂದಿರುವ ರೈತರ ತಂಡಗಳಲ್ಲಿ ಹಲವು ಮಹಿಳೆಯರೂ, ಮಕ್ಕಳೂ ಇದ್ದಾರೆ. ಗಡಿ ಭಾಗದಲ್ಲಿ ಹಾಕಿರುವ ಮುಳ್ಳುತಂತಿ ಬೇಲಿ, ಕಾಂಕ್ರೀಟ್ ಬ್ಲಾಕ್ ಮತ್ತು ಬ್ಯಾರಿಕೇಡ್ಗಳನ್ನು ರೈತರು ಹಾಗೇ ಇರಿಸಿದ್ದಾರೆ. ಸಂಚಾರವನ್ನು ಬಂದ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.