ADVERTISEMENT

ದೆಹಲಿ ಚುನಾವಣೆ: ಎಎಪಿ ಹ್ಯಾಟ್ರಿಕ್‌; ನಡೆಯದ ಮೋದಿ–ಶಾ ಆಟ

ಕಾಂಗ್ರೆಸ್‌ ಶೂನ್ಯ ಸಾಧನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 0:55 IST
Last Updated 12 ಫೆಬ್ರುವರಿ 2020, 0:55 IST
ಗೆಲುವಿನ ನಗೆ ಬೀರಿದ ಅರವಿಂದ್ ಕೇಜ್ರಿವಾಲ್
ಗೆಲುವಿನ ನಗೆ ಬೀರಿದ ಅರವಿಂದ್ ಕೇಜ್ರಿವಾಲ್   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಬಿಜೆಪಿಯ ಅಭೂತಪೂರ್ವ ಚುನಾವಣಾ ರ‍್ಯಾಲಿಗಳು, ಪೌರತ್ವ (ತಿದ್ದುಪಡಿ) ಕಾಯ್ದೆ ಎಬ್ಬಿಸಿದ್ದ ಅಬ್ಬರದ ಅಲೆಗಳು, ಎದುರಾಳಿಗಳು ನಡೆಸಿದ ತೀವ್ರ ವಾಗ್ದಾಳಿಗಳು ಯಾವುವೂ ರಾಷ್ಟ್ರದ ರಾಜಧಾನಿ, ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಸತತ ಮೂರನೇ ಗೆಲುವಿನ ಓಟಕ್ಕೆ ತಡೆಯೊಡ್ಡಲು ಯಶಸ್ವಿಯಾಗಲಿಲ್ಲ. ಎಎಪಿಯ ನಾಗಾಲೋಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಅಕ್ಷರಶಃ ದೂಳೀಪಟವಾಗಿ ಹೋದವು.

ಕಳೆದ ಚುನಾವಣೆಗೆ ಹೋಲಿಸಿದರೆ ಈ ಸಲ ಬಿಜೆಪಿಯ ಸಾಧನೆ ಕೊಂಚ ಸುಧಾರಿಸಿದರೆ, ಕಾಂಗ್ರೆಸ್‌ ಪಕ್ಷದ್ದು ಮತ್ತೆ ಶೂನ್ಯ ಸಂಪಾದನೆ. ಎಂಟು ತಿಂಗಳ ಹಿಂದೆಯಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಒಂದೂ ಕ್ಷೇತ್ರ ಗೆಲ್ಲದಿದ್ದ ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ, ಈಗ ಪುನಃ ಪುಟಿದೆದ್ದು ನಿಂತಿತು.

ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಶಾಹೀನ್‌ ಬಾಗ್‌ನಲ್ಲಿ ನಡೆದ ಪ್ರತಿಭಟನೆಗಳನ್ನೇ ಅಸ್ತ್ರ ಮಾಡಿಕೊಂಡ ಶಾ ಪಡೆ, ಮತಗಳ ದ್ರುವೀಕರಣಕ್ಕೆ ಕೈಹಾಕಿದರೆ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ವಲಯಗಳಲ್ಲಿ ತನ್ನ ನೇತೃತ್ವದ ಸರ್ಕಾರ ಮಾಡಿದ ಸಾಧನೆಗಳನ್ನೇ ಎಎಪಿ ಚುನಾವಣಾ ವಿಷಯ ಮಾಡಿಕೊಂಡಿತ್ತು. ‘ವಿಧಾನಸಭಾ ಚುನಾವಣೆಯಲ್ಲಿ ನಮಗೆ ಮುಖ್ಯವಾಗಿರುವುದು ಸ್ಥಳೀಯ ವಿಷಯಗಳೇ ಹೊರತು ರಾಷ್ಟ್ರೀಯ ವಿದ್ಯಮಾನಗಳಲ್ಲ’ ಎನ್ನುವುದು ಮತದಾರರು ಬರೆದ ತೀರ್ಪಿನ ಒಟ್ಟು ಸಾರ.

ADVERTISEMENT

ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್, ಕೇಜ್ರಿವಾಲ್‌ ಅವರನ್ನು ‘ಉಗ್ರ’ ಎಂದು ವೈಯಕ್ತಿಕವಾಗಿ ನಿಂದಿಸಿದ್ದು ಕೂಡ ಬಿಜೆಪಿಗೆ ಬಲು ದುಬಾರಿಯಾಗಿ ಪರಿಣಮಿಸಿತು. ‘ಜನರಿಗೆ ಬೇಕಾಗಿದ್ದ ಸೌಲಭ್ಯಗಳನ್ನು ನೀಡಿದ್ದಕ್ಕೆ ಬಹುಮಾನದ ರೂಪವಾಗಿ ಈ ಗೆಲುವು ಸಿಕ್ಕಿದೆ. ಇದೊಂದು ಹೊಸ ವಿಧದ ರಾಜಕೀಯದ ಆರಂಭ’ ಎಂದು ತಮ್ಮ ಪಕ್ಷದ ಸಾಧನೆಯನ್ನು ಸಂಭ್ರಮಿಸಿದರು ಕೇಜ್ರಿವಾಲ್‌.

ಗೆದ್ದ ಪ್ರಮುಖರು

* ಅರವಿಂದ ಕೇಜ್ರಿವಾಲ್‌

* ಮನೀಶ್‌ ಸಿಸೋಡಿಯಾ

* ರಾಘವ್‌ ಛಡ್ಡಾ

* ಗೋಪಾಲ್‌ ರಾಯ್‌

* ಸತ್ಯೇಂದರ್‌ ಜೈನ್‌

* ಆತಿಶಿ ಮರ್ಲೆನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.