ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ: ಜಾಹೀರಾತು ಕಂಪನಿ ನಿರ್ದೇಶಕ ಬಂಧನ

ಪಿಟಿಐ
Published 9 ಫೆಬ್ರುವರಿ 2023, 11:26 IST
Last Updated 9 ಫೆಬ್ರುವರಿ 2023, 11:26 IST
   

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿನ ಹಣ ಅಕ್ರಮ ವರ್ಗಾವಣೆ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ) ಜಾಹೀರಾತು ಕಂಪನಿಯ ನಿರ್ದೇಶಕರೊಬ್ಬರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಚಾರಿಯಟ್‌ ಪ್ರೊಡಕ್ಷನ್‌ ಪ್ರೈವೆಟ್‌ ಲಿಮಿಟೆಡ್‌ ನಿರ್ದೇಶಕ ರಾಜೇಶ್ ಜೋಶಿ ಬಂಧಿತ ಆರೋಪಿ. ಇವರ ವಿರುದ್ಧ ಇ.ಡಿಯು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಕೇಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಬಕಾರಿ ಗುತ್ತಿಗೆ ಲಂಚದ ಹಣವು 2022ರಲ್ಲಿ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪರ ಪ್ರಚಾರಕ್ಕೆ ಬಳಕೆಯಾಗಿದೆ. ಇದರಲ್ಲಿ ಜಾಹೀರಾತು ಕಂಪನಿ ಹೊಂದಿರುವ ಸಂಪರ್ಕದ ಬಗ್ಗೆ ಕಂಪನಿಯ ಪ್ರವರ್ತಕ ರಾಜೇಶ್‌ ಜೋಶಿ ಅವರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಅಬಕಾರಿ ಗುತ್ತಿಗೆಯಲ್ಲಿ ಪಡೆದ ₹100 ಕೋಟಿ ‘ಕಿಕ್‌ಬ್ಯಾಕ್‌’ನಲ್ಲಿ ಒಂದು ಭಾಗವು ಗೋವಾ ವಿಧಾನಸಭಾ ಚುನಾವಣೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ ಪರ ಪ್ರಚಾರಕ್ಕೆ ಬಳಕೆಯಾಗಿದೆ ಎಂದು ಇ.ಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಜಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಇ.ಡಿ ಇದುವರೆಗೆ ಜೋಶಿ ಸೇರಿ ಎಂಟು ಆರೋಪಿಗಳನ್ನು ಬಂಧಿಸಿದೆ. ಪಂಜಾಬ್‌ನ ಶಿರೋಮಣಿ ಅಕಾಲಿ ದಳದ ಶಾಸಕ ದೀಪ್ ಮಲ್ಹೋತ್ರಾ ಅವರ ಪುತ್ರ ಗೌತಮ್‌ ಮಲ್ಹೋತ್ರಾನನ್ನು ಮಂಗಳವಾರವಷ್ಟೇ ಬಂಧಿಸಲಾಗಿತ್ತು.

ದೂರವಾಣಿ ಕರೆ ವಿವರದ ದಾಖಲೆ (ಸಿಡಿಆರ್‌) ಪರಿಶೀಲನೆಯಲ್ಲಿ ಆರೋಪಿ ದಿನೇಶ್‌ ಅರೋರಾ ಜತೆಗೆ ರಾಜೇಶ್‌ ಜೋಶಿ ಸಂಪರ್ಕದಲ್ಲಿರುವುದು ಧೃಡಪಟ್ಟಿದೆ ಎಂದು ಇ.ಡಿ ಸಲ್ಲಿಸಿರುವ ಎರಡನೇ ಚಾರ್ಜ್‌ಶೀಟ್‌ನಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.