ADVERTISEMENT

ದೀರ್ಘ ವಿಳಂಬದ ಬಳಿಕ ದೆಹಲಿಗೆ ಕಾಲಿಟ್ಟ ಮುಂಗಾರು ಮಳೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 9:18 IST
Last Updated 13 ಜುಲೈ 2021, 9:18 IST
   

ನವದೆಹಲಿ: ದೀರ್ಘ ವಿಳಂಬದ ಬಳಿಕ ದೇಶದ ರಾಜಧಾನಿಗೆ ಕೊನೆಗೂ ಮುಂಗಾರು ಮಳೆಯ ಅಗಮನವಾಗಿದೆ.

ದೆಹಲಿಯ ಹಲವೆಡೆ ಬೆಳಿಗ್ಗೆಯಿಂದ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯುತ್ತಿದ್ದು, ಗುರುಗ್ರಾಮ ಮತ್ತು ಫರಿದಾಬಾದ್‌ನಲ್ಲಿಯೂ ಮಳೆಯಾದ ವರದಿಯಾಗಿದೆ.

‘ದೆಹಲಿ, ಎನ್‌ಸಿಆರ್ (ಬಹದ್ದೂರ್‌ಗಡ, ಗುರುಗ್ರಾಮ್, ಫರಿದಾಬಾದ್, ಲೋನಿ ಡೆಹತ್, ನೋಯ್ಡಾ) ಗೋಹಾನಾ, ಸೋನಿಪತ್, ರೋಹ್ಟಕ್ ( ಹರಿಯಾಣ), ಖೇಕ್ರಾ (ಯುಪಿ)ನಲ್ಲಿ ಮುಂದಿನ 2 ಗಂಟೆಗಳಲ್ಲಿ ಸಾಧಾರಣ ಮಳೆಯಾಗಲಿದೆ’ ಎಂದು ಐಎಂಡಿ ಟ್ವೀಟ್ ಮಾಡಿತ್ತು.

ADVERTISEMENT

ಸಾಮಾನ್ಯವಾಗಿ ಜೂನ್ 27ರ ಹೊತ್ತಿಗೆ ಮುಂಗಾರು ಮಳೆ ದೆಹಲಿಗೆ ಪ್ರವೇಶಿಸುತ್ತಿತ್ತು. ಈ ವರ್ಷ 16 ದಿನ ವಿಳಂಬವಾಗಿದೆ. 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮುಂಗಾರು ಇಷ್ಟು ದೀರ್ಘ ವಿಳಂಬವಾಗಿದೆ ಎಂದು ಪಿಟಿಐ ತಿಳಿಸಿದೆ. 2002 ರಲ್ಲಿ ‌ಜುಲೈ 19 ರಂದು ದೆಹಲಿಯನ್ನು ಪ್ರವೇಶಿಸಿತ್ತು.

ಈ ಮಧ್ಯೆ, ಹವಾಮಾನ ಇಲಾಖೆಯ ಕಳಪೆ ಮುನ್ಸೂಚನೆ ಬಗ್ಗೆ ಭಾರೀ ಟೀಕೆ ಕೇಳಿಬಂದಿದೆ..

ಅಂತಿಮವಾಗಿ, ದೆಹಲಿಯಲ್ಲಿ ವರುಣನ ಸಿಂಚನವಾದ ಬಳಿಕ ಮುಂಗಾರಿನ ಆರಂಭವಾಗಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ.

ಜೂನ್ 16ರಂದೇ ದೆಹಲಿಗೆ ಮುಂಗಾರು ಪ್ರವೇಶಿಸಲಿದೆ ಎಂದು ಈ ಹಿಂದೆ ಹವಾಮಾನ ಇಲಾಖೆ ತಿಳಿಸಿತ್ತು. ಬಳಿಕ, ಜುಲೈ 7ರಂದು ಮುಂಗಾರು ಪ್ರವೇಶಕ್ಕೆ ವಾತಾವರಣ ಅನುಕೂಲಕರವಾಗಿದೆ ಎಂದು ಹೇಳಲಾಗಿತ್ತು. ಬಳಿಕ, ಜುಲೈ 10ಕ್ಕೆ ಮುಂಗಾರಿನ ಮೊದಲ ಮಳೆ ಬೀಳಲಿದೆ ಎಂದು ಹೇಳಿತ್ತು. ಶನಿವಾರ ತನ್ನ ಮುನ್ಸೂಚನೆಯನ್ನು ಮತ್ತೆ ಪರಿಷ್ಕರಿಸಿದ್ದ ಹವಾಮಾನ ಇಲಾಖೆ 24 ಗಂಟೆಗಳಲ್ಲಿ ಮಳೆ ಬೀಳಬಹುದೆಂದು ಹೇಳಿತ್ತು. ಆದರೆ, ಸೋಮವಾರವೂ ಮಳೆ ಬಂದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.