ADVERTISEMENT

ದೆಹಲಿ ಹೋಟೆಲ್‌ ಅಗ್ನಿ ಅವಘಡ: 17 ಮಂದಿ ದುರ್ಮರಣ; ನಿರ್ಲಕ್ಷ್ಯವೇ ಕಾರಣ ?

ತುರ್ತು ನಿರ್ಗಮನ ದ್ವಾರ ಲಾಕ್‌ ಆಗಿದ್ದರಿಂದ ಅನಾಹುತ

ಪಿಟಿಐ
Published 12 ಫೆಬ್ರುವರಿ 2019, 19:51 IST
Last Updated 12 ಫೆಬ್ರುವರಿ 2019, 19:51 IST
   

ನವದೆಹಲಿ:ಇಲ್ಲಿನ ’ಅರ್ಪಿತ್‌ ಪ್ಯಾಲೇಸ್‌‘ ಹೋಟೆಲ್‌ನಲ್ಲಿ ಚಿಕ್ಕದಾದ ತುರ್ತು ನಿರ್ಗಮನ ದ್ವಾರ ಲಾಕ್‌ ಆಗಿದ್ದರಿಂದ ದೊಡ್ಡ ಪ್ರಮಾಣದಲ್ಲಿ ಸಾವು ಸಂಭವಿಸಿದೆ‘ ಎಂದು ಕೇಂದ್ರ ಸಚಿವ ಕೆ.ಜೆ. ಅಲ್ಫೋನ್ಸ್‌ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತಿಳಿಸಿದ್ದಾರೆ.

’ಹೋಟೆಲ್‌ನ ಒಳಗಡೆ ಸಾಕಷ್ಟು ಪ್ರಮಾಣದಲ್ಲಿ ಮರದ ಪೀಠೋಪಕರಣಗಳಿದ್ದವು. ಅಲ್ಲದೇ ಕಟ್ಟಡದ ಮೇಲ್ಭಾಗದಲ್ಲಿ ಸಾಕಷ್ಟು ತ್ಯಾಜ್ಯವಿದ್ದ ಕಾರಣ ಬೆಂಕಿ ವ್ಯಾಪಕವಾಗಿ ಹರಡಿದೆ‘ ಎಂದು ಅವರು ಮಾಹಿತಿ ನೀಡಿದರು.

ಕಟ್ಟಡದಿಂದ ಜಿಗಿದರೂ ಬದುಕುಳಿಲ್ಲ:ನಗರದ ಹೋಟೆಲ್‌ನಲ್ಲಿ ಸಂಭವಿಸಿದ ಮೃತರಲ್ಲಿ ಆದಾಯ ತೆರಿಗೆ ಇಲಾಖೆಯ ಸಹಾಯಕ ಕಮೀಷನರ್‌ ಕೂಡ ಸೇರಿದ್ದಾರೆ.

ADVERTISEMENT

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ, ನಾಲ್ಕನೇ ಮಹಡಿಯಿಂದ ಜಿಗಿದಿದ್ದಾರೆ, ಆದರೆ ಉರಿಯುವ ಬೆಂಕಿಗೆ ಬಿದ್ದು, ಸಾವನ್ನಪ್ಪಿದ್ದಾರೆ.

ಮೃತರನ್ನು ಪಂಚಕುಲಾ ನಿವಾಸಿ ಸುರೇಶ್‌ ಕುಮಾರ್‌ ಎಂದು ಗುರುತಿಸಲಾಗಿದೆ. ವಿವಾಹ ವಾರ್ಷಿಕೋತ್ಸವದ ದಿನದಂದೇ ಅವರು ಸಾವನ್ನಪ್ಪಿದ್ದಾರೆ. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

'ಕುಮಾರ್‌ ಮಂಗಳವಾರ ತಡರಾತ್ರಿ ಪತ್ನಿಗೆ ಕರೆಮಾಡಿ ವಿವಾಹ ವಾರ್ಷಿಕೋತ್ಸವ ಶುಭಾಶಯ ತಿಳಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಈ ಅನಾಹುತ ಸಂಭವಿಸಿದೆ‘ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಮದುವೆಗೆ ಬಂದವರು ಬೆಂದು ಹೋದರು:ಕೇರಳದ ಎರ್ನಾಕುಲಂ ಜಿಲ್ಲೆಯ 13 ಮಂದಿ ಗಾಜಿಯಾಬಾದ್‌ನಲ್ಲಿ ನಡೆಯಲಿರುವ ಮದುವೆಯೊಂದರಲ್ಲಿ ಭಾಗವಹಿಸಲು ಕುಟುಂಬವೊಂದು ಇದೇ ಹೋಟೆಲ್‌ನ ನಾಲ್ಕು ಕೊಠಡಿಯಲ್ಲಿ ತಂಗಿತ್ತು. ಬೆಳಿಗ್ಗೆ ಮದುವೆಗೆ ಹೊರಡಲು ತಯಾರಿಯಲ್ಲಿದ್ದ ಸಂದರ್ಭದಲ್ಲೇ ದುರಂತ ಸಂಭವಿಸಿದ ಕಾರಣ, ಮೂವರು ಉಸಿರುಗಟ್ಟಿ ಸಾವನ್ನಪ್ಪಿದ್ದು, ಉಳಿದ 10 ಮಂದಿ ಪಾರಾಗಿದ್ದಾರೆ.

ಎಫ್‌ಐಆರ್‌ ದಾಖಲು: ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ, ಹೋಟೆಲ್‌ ಆಡಳಿತ ಮಂಡಳಿ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಮಾರ್ಚ್‌ಗೆ ಲೈಸೆನ್ಸ್‌ ಮುಕ್ತಾಯ: 2005ರ ಅಕ್ಟೋಬರ್‌ನಲ್ಲಿ ಹೋಟೆಲ್‌ ನಡೆಸಲು ಲೈಸೆನ್ಸ್‌ ನೀಡಲಾಗಿತ್ತು. ಅಲ್ಲದೇ, ಪ್ರತಿ ವರ್ಷ ನವೀಕರಣ ಮಾಡಲಾಗುತ್ತಿತ್ತು. 2018ರ ಮೇ 25ರಂದು ನವೀಕರಣ ಮಾಡಲಾಗಿದ್ದು, ಮಾರ್ಚ್‌ 31ಕ್ಕೆ ಮುಕ್ತಾಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.