ADVERTISEMENT

ರೈತರ ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರ; 7 ಎಫ್‌ಐಆರ್ ದಾಖಲಿಸಿದ ದೆಹಲಿ ಪೊಲೀಸ್

ಪಿಟಿಐ
Published 27 ಜನವರಿ 2021, 2:00 IST
Last Updated 27 ಜನವರಿ 2021, 2:00 IST
ರೈತರ ಪ್ರತಿಭಟನೆಯಲ್ಲಿ ಹಿಂಸಾಚಾರ
ರೈತರ ಪ್ರತಿಭಟನೆಯಲ್ಲಿ ಹಿಂಸಾಚಾರ   

ನವದೆಹಲಿ: ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನಾ ನಿರತ ರೈತರ ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮಂಗಳವಾರ, ಏಳು ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಜಿಲ್ಲೆ ಮತ್ತು ದ್ವಾರಕಾದಲ್ಲಿ ತಲಾ ಮೂರು ಮತ್ತು ಶಹದಾರ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಿಸಲಾಗಿದೆ. ಮತ್ತಷ್ಟು ಎಫ್‌ಐಆರ್ ದಾಖಲಾಗುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟ್ರ್ಯಾಕ್ಟರ್ ಪೆರೇಡ್ ವೇಳೆಯಲ್ಲಿ ಭಾರಿ ಹಿಂಸಾಚಾರ ಸಂಭವಿಸಿತ್ತು. ಬ್ಯಾರಿಕೇಡ್‌ಗಳನ್ನು ಮುರಿದ ರೈತರು, ಪೊಲೀಸರ ವಿರುದ್ಧ ಹೋರಾಟಕ್ಕಿಳಿದರು. ಭದ್ರತಾ ವಾಹನಗಳನ್ನು ಹೊಡೆದುರುಳಿಸಿದರು. ಅಲ್ಲದೆ ಕೆಂಪು ಕೋಟೆಯಲ್ಲಿ ಸಂಘದ ಧ್ವಜವನ್ನು ಹಾರಿಸಿದರು ಎಂದು ಹೇಳಿದೆ.

ADVERTISEMENT

ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ 86 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಐಟಿಒ ಬಳಿ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಓರ್ವ ಪ್ರತಿಭಟನಾಕಾರರು ಮೃತಪಟ್ಟಿದ್ದರು.

ದೆಹಲಿ ಪೊಲೀಸರ ಜೊತೆಗೆ ಹಲವು ಸುತ್ತಿನ ಮಾತುಕತೆಯ ಬಳಿಕ ಟ್ರ್ಯಾಕ್ಟರ್ ಪೆರೇಡ್‌ಗೆ ಸಂಯುಕ್ತ ಕಿಸಾನ್ ಮೋರ್ಚಾ ಆಹ್ವಾನ ನೀಡಿದ್ದವು. ಅಲ್ಲದೆ ಶಾಂತಿಯುತ ಪ್ರತಿಭಟನೆಗಾಗಿ ನಿರ್ದಿಷ್ಟ ಮಾರ್ಗ ಹಾಗೂ ಸಮಯ ನಿಗದಿಪಡಿಸಲಾಗಿತ್ತು. ಆದರೆ ಮಂಗಳವಾರ ಬೆಳಗ್ಗೆ 8.30ರ ವೇಳೆಗೆ ಗಡಿಯಲ್ಲಿ ಒಗ್ಗೂಡಿದ 6,000ದಿಂದ 7,000 ಟ್ರ್ಯಾಕ್ಟರ್‌ಗಳು ಪೂರ್ವ ನಿರ್ಧಾರಿತ ಮಾರ್ಗದಲ್ಲಿ ಹೋಗುವ ಬದಲು ರಾಷ್ಟ್ರ ರಾಜಧಾನಿಯತ್ತ ಪ್ರಯಾಣ ಬೆಳೆಸಿದರು. ಹಲವು ಬಾರಿ ಮನವಿ ಮಾಡಿದರೂ ರೈತರು ಅದನ್ನು ಲೆಕ್ಕಿಸದೆ ಬ್ಯಾರಿಕೇಡ್‌ಗಳನ್ನು ಮುರಿದು ಹಿಂಸಾಚಾರಕ್ಕೆ ತಿರುಗಿದರು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಗಾಝಿಪುರ ಹಾಗ ಟಿಕ್ರಿ ಗಡಿ ಪ್ರದೇಶಗಳಲ್ಲೂ ಇದಕ್ಕೆ ಸಮಾನವಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಬ್ಯಾರಿಕೇಡ್‌ಗಳನ್ನು ಮುರಿದ ರೈತರು ಪೊಲೀಸ್ ವಾಹನ ಹಾಗೂ ಸಿಬ್ಬಂದಿಗಳ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದರು.

ಕೆಂಪುಕೋಟೆಗೆ ನುಗ್ಗಿದ ರೈತರು ತಮ್ಮ ಸಂಘದ ಧ್ವಜವನ್ನು ಹಾರಿಸಿದರು. ಕೊನೆಗೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸ್ ಯಶಸ್ವಿಯಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.