ADVERTISEMENT

ಸ್ಫೋಟಕ್ಕೆ ಸಂಚು: ಬಂಧಿತರಲ್ಲಿ 7 ಮಂದಿ ಬಾಂಗ್ಲಾದವರು

*ಭಾರತ ವಿರೋಧಿ ಪೋಸ್ಟರ್‌ ಅಂಟಿಸಿದ್ದ ಅರೋಪಿಗಳು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 15:40 IST
Last Updated 22 ಫೆಬ್ರುವರಿ 2026, 15:40 IST
ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ ಶಂಕಿತ ಭಯೋತ್ಪಾದಕರನ್ನು ಭಾನುವಾರ ನವದೆಹಲಿಯಲ್ಲಿ ಬಂಧಿಸಿದ ದೆಹಲಿ ಪೊಲೀಸರು–ಪಿಟಿಐ ಚಿತ್ರ
ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ ಶಂಕಿತ ಭಯೋತ್ಪಾದಕರನ್ನು ಭಾನುವಾರ ನವದೆಹಲಿಯಲ್ಲಿ ಬಂಧಿಸಿದ ದೆಹಲಿ ಪೊಲೀಸರು–ಪಿಟಿಐ ಚಿತ್ರ   

ನವದೆಹಲಿ: ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ದೆಹಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ ಬಾಂಗ್ಲಾದೇಶದ ಏಳು ಮಂದಿ ಸೇರಿದಂತೆ 8 ಮಂದಿಯನ್ನು ಬಂಧಿಸಲಾಗಿದೆ. ‌

ಈ ಆರೋಪಿಗಳು ನವದೆಹಲಿಯ ಮೆಟ್ರೊ ನಿಲ್ದಾಣದ ಸಮೀಪ ಭಯೋತ್ಪಾದಕರ ಪರ ಪೋಸ್ಟರ್‌ಗಳನ್ನು ಅಂಟಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ರಾಜಕಾರಣಿಯೊಬ್ಬರ ಹತ್ಯೆ ಸಂಬಂಧ ಆತ್ಮಾಹುತಿ ದಾಳಿ ನಡೆಸಲು 2007ರಲ್ಲಿ ದೆಹಲಿಗೆ ಬಂದಿದ್ದ ವೇಳೆ ಶಬ್ಬೀರ್‌ ಅಹಮ್ಮದ್‌ ಲೊನ್‌ ಬಂಧಿತನಾಗಿದ್ದ. 2018–19ರಲ್ಲಿ ಬಿಡುಗಡೆಯಾಗಿದ್ದ. ನಂತರ, ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ನಂಟು ಸಾಧಿಸಿದ್ದ’ ಎಂದು ದೆಹಲಿ ವಿಶೇಷ ಹೆಚ್ಚುವರಿ ಪೊಲೀಸ್‌ ಕಮೀಷನರ್‌ ಪ್ರಮೋದ್‌ ಕುಮಾರ್ ಕುಶ್ವಾಹಾ ತಿಳಿಸಿದ್ದಾರೆ.

ADVERTISEMENT

‘2016ರ ಜುಲೈನಲ್ಲಿ ಹತ್ಯೆಯಾದ ಉಗ್ರ ಬುರ್ಹಾನ್‌ ವಾನಿ, ಪಾಕಿಸ್ತಾನ ನಡೆಸಿದ ಭಯೋತ್ಪಾದಕ ಕೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟರ್‌ಗಳನ್ನು ಅಂಟಿಸಿದ್ದ. ಬಂಧಿತರು, ದೇಶದ ಇತರೆಡೆಗಳಲ್ಲಿ ಯಾವುದಾದರೂ ಭಯೋತ್ಪಾದಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರೆ ಎಂಬುದರ ಕುರಿತು ತನಿಖೆ ನಡೆಸಲಾಗುವುದು’ ಎಂದು ಹೇಳಿದ್ದಾರೆ.

ಉಳಿದಂತೆ ಬಾಂಗ್ಲಾದ ಮಿಜನುರ್‌ ರೆಹಮಾನ್‌, ಮೊಹಮ್ಮದ್‌ ಶಬತ್‌ ಉಮರ್‌, ಮೊಹಮ್ಮದ್‌ ಲಿಟನ್‌, ಮೊಹಮ್ಮದ್‌ ಶಹೀದ್‌, ಮೊಹಮ್ಮದ್‌ ಉಜ್ಜಲ್ ಎಂಬವರನ್ನು ಬಂಧಿಸಲಾಗಿದೆ.

ಪೋಸ್ಟರ್‌ ನೀಡಿದ ಸುಳಿವು: ನವದೆಹಲಿಯ ಕಾಶ್ಮೀರಿ ಗೇಟ್‌ನ ಮೆಟ್ರೊ ಪಿಲ್ಲರ್‌ ಮೇಲೆ ಭಾರತ ವಿರೋಧಿ ಪೋಸ್ಟರ್‌ಗಳನ್ನು ಅಳವಡಿಸಲಾಗಿತ್ತು. ಅದರ ಮೂಲ ಪತ್ತೆಹಚ್ಚಲು ಹೋದ ದೆಹಲಿ ಪೊಲೀಸರು, ಕೃತ್ಯ ಎಸಗಿದವರು ಕೋಲ್ಕತ್ತದ ನಿವಾಸಿಗಳು ಎಂಬುದು ಖಚಿತಪಡಿಸಿಕೊಂಡಿದ್ದರು. 

ಸ್ಥಳೀಯ ಪೊಲೀಸರಿಂದ ಈ ಪ್ರಕರಣವನ್ನು ದೆಹಲಿ ಪೊಲೀಸ್‌ ಇಲಾಖೆಯ ವಿಶೇಷ ಘಟಕಕ್ಕೆ ಹಸ್ತಾಂತರಿಸಲಾಗಿತ್ತು. ತಕ್ಷಣವೇ ತಂಡವು ಕೋಲ್ಕತ್ತಕ್ಕೆ ತೆರಳಿತ್ತು. ಸ್ಥಳೀಯ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು ಉಮರ್‌ ಫಾರೂಖ್‌ ಹಾಗೂ ರೊಬಿಲ್‌–ಉಲ್‌–ಇಸ್ಲಾಂನನ್ನು ಮೊದಲಿಗೆ ಬಂಧಿಸಿದ್ದರು. ವಿಚಾರಣೆ ವೇಳೆ ಇಬ್ಬರೂ ಬಾಂಗ್ಲಾದೇಶದ ನಿವಾಸಿಗಳು ಎಂದು ದೃಢಪಟ್ಟಿತ್ತು. 

‘ಮತ್ತಷ್ಟು ವಿಚಾರಣೆ ನಡೆಸಿದಾಗ ಶಬ್ಬೀರ್‌ ಅಹಮ್ಮದ್‌ ಲೊನ್‌ ಕೂಡ ಇವರ ಜೊತೆ ಕೈ ಜೋಡಿಸಿದ್ದು ಕಂಡುಬಂತು. 2007ಕ್ಕೂ ಮೊದಲು ಈತ ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಲಷ್ಕರ್‌–ಎ–ತಯಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯೊಂದಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ತರಬೇತಿ ಪಡೆದುಕೊಂಡಿದ್ದ. 2019ರಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಈತ ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದುಕೊಂಡು, ಮತ್ತೆ ಎಲ್‌ಇಟಿ ಜೊತೆಗೆ ಸಂಪರ್ಕ ಸಾಧಿಸಿದ್ದನು’ ಎಂದು ಪ್ರಮೋದ್‌ ಕುಮಾರ್ ಕುಶ್ವಾಹಾ ಮಾಹಿತಿ ನೀಡಿದ್ದಾರೆ.

‘ಮತ್ತೆ ತನ್ನ ಸದಸ್ಯರನ್ನು ಒಟ್ಟುಗೂಡಿಸಿದ್ದ ಶಬ್ಬೀರ್‌, ಇವರ ಜೊತೆಗೆ ದಾಳಿಯ ಅಣಕು ತರಬೇತಿ ನಡೆಸಿದ್ದ.  ದೆಹಲಿ ಮಾತ್ರವಲ್ಲದೇ, ಫೆಬ್ರುವರಿ 10ರಂದು ಕೋಲ್ಕತ್ತದಲ್ಲಿ ಕೂಡ ಪೋಸ್ಟರ್‌ ಅಂಟಿಸಿದ್ದ. ಕೋಲ್ಕತ್ತದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲಸಿದ್ದ’ ಎಂದು ವಿವರಿಸಿದ್ದಾರೆ.

ಈತನ ವಿಚಾರಣೆ ವೇಳೆ ಬಾಂಗ್ಲಾದೇಶದ ನಿವಾಸಿಗಳು ತಮಿಳುನಾಡಿನಲ್ಲಿ ನೆಲಸಿರುವುದು ಕಂಡುಬಂತು. ದೇಶದಲ್ಲಿ ಭಯೋತ್ಪಾದಕ ಕೃತ್ಯವೆಸಗಲು ಅವರನ್ನು ಭಾರತಕ್ಕೆ ಕರೆತರಲಾಗಿತ್ತು.  ಗಾರ್ಮೆಂಟ್ಸ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅವರನ್ನು ಬಂಧಿಸಲಾಗಿದೆ’ ಎಂದು ಕುಶ್ವಾಹಾ ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.