ನವದೆಹಲಿ: ಕಾರಿನಡಿಗೆ ಸಿಲುಕಿ ಮೃತಪಟ್ಟ 20 ವರ್ಷದ ಯುವತಿಯೊಂದಿಗೆ ಆಕೆಯ ಗೆಳತಿಯೂ ಇದ್ದಳೆಂಬುದು ಗೊತ್ತಾಗಿದೆ. ಇಬ್ಬರೂ ಒಂದೇ ವಾಹನದಲ್ಲಿ ಪ್ರಯಾಣಿಸಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಅಪಘಾತಕ್ಕೂ ಮುನ್ನ ಯುವತಿ ತನ್ನ ಸ್ನೇಹಿತೆ ಜತೆಗೆ ಇದ್ದದ್ದು ಗೊತ್ತಾಗಿದೆ. ಇಬ್ಬರೂ ಒಟ್ಟಿಗೆ ದ್ವಿಚಕ್ರವಾಹನದಲ್ಲಿ ಪ್ರಯಾಣಿಸಿದ್ದಾರೆ. ನಂತರ ಮೃತ ಯುವತಿ ತನ್ನ ಗೆಳತಿಯನ್ನು ಇಳಿಸಿ ಹೋದಳೋ ಅಥವಾ, ಗೆಳತಿಯು ಆಕೆಯನ್ನು ಒಂಟಿಯಾಗಿ ಬಿಟ್ಟು ಹೋದಳೋ ಎಂಬುದು ಖಚಿತವಾಗಬೇಕಿದೆ’ ಎಂದು ಮೂಲಗಳು ಹೇಳಿವೆ.
ಪ್ರಕರಣದ ಬಗ್ಗೆ ಒಂದು ತೀರ್ಮಾನಕ್ಕೆ ಬರಲು ಇದೀಗ ಪೊಲೀಸ್ ತಂಡವು ಸಂಪೂರ್ಣ ಘಟನೆಯ ಟೈಮ್ಲೈನ್ ಅನ್ನು ಸಿದ್ಧಪಡಿಸಲು ಮುಂದಾಗಿದೆ. ಮೃತ ಯುವತಿಯ ಗೆಳತಿಯ ಹೇಳಿಕೆಯನ್ನು ದಾಖಲಿಸಲಾಗುತ್ತದೆ. ಆಕೆಯ ಹೇಳಿಕೆ ತನಿಖೆಗೆ ನಿರ್ಣಾಯಕವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ರಾತ್ರಿ ವಿಶೇಷ ಪೊಲೀಸ್ ಆಯುಕ್ತೆ ಶಾಲಿನಿ ಸಿಂಗ್ ಅವರೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆ ನಡೆದ ಸ್ಥಳಕ್ಕೆ 12 ಗಂಟೆಗೆ ಬಂದ ಶಾಲಿನಿ ಸಿಂಗ್ ಅವರೊಂದಿಗೆ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಜಿತೇಂದರ್ ಕುಮಾರ್ ಮೀನಾ ಮತ್ತು ಸಿಬ್ಬಂದಿ ಇದ್ದರು. ಅಪಘಾತ ನಡೆದ ಸ್ಥಳ ಮತ್ತು ಯುವತಿಯ ದೇಹವನ್ನು 12 ಕಿ.ಮೀ ವರೆಗೆ ಎಳೆದೊಯ್ದ ಮಾರ್ಗವನ್ನು ಪೊಲೀಸರು ಕೂಲಂಕಷವಾಗಿ ಪರಿಶೀಲಿಸಿದರು.
ಕೇಂದ್ರ ಗೃಹ ಇಲಾಖೆಯು ಪ್ರಕರಣದ ತನಿಖೆಗೆ ಸಮಿತಿ ರಚಿಸಿದೆ. ಶಾಲಿನಿ ಸಿಂಗ್ ಅವರನ್ನು ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಅವರು ಮಂಗಳವಾರ ಸಂಜೆಯೊಳಗೆ ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಬೇಕಾಗಿದೆ.
ಇವುಗಳನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.