ನವದೆಹಲಿ: ಮಾರ್ಚ್– ಏಪ್ರಿಲ್ನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ‘ಕಳಂಕರಹಿತ’ವಾಗಿ ನಡೆಸಲು ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಗುರುವಾರ ಸಲಹೆ ನೀಡಿದರು.
ದೆಹಲಿಯಲ್ಲಿ ಮುಖ್ಯ ಚುನಾವಣಾ ಅಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಚುನಾವಣೆ ನಡೆಸಲು ಉತ್ತಮ ರೀತಿಯಲ್ಲಿ ತಯಾರಿ ಮಾಡಿಕೊಂಡಿರಬೇಕು ಎಂದು ಅವರು ಹೇಳಿದರು.
ಈಚೆಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಪಡೆದುಕೊಂಡ ಅನುಭವ, ಕಲಿಕೆ ಕುರಿತು ಚರ್ಚಿಸಲು ಈ ಸಮಾವೇಶವನ್ನು ಆಯೋಜಿಸಲಾಗಿತ್ತು. ಚುನಾವಣಾ ಸಿದ್ಧತೆ, ಖರ್ಚುವೆಚ್ಚ ಕುರಿತ ಮೇಲ್ವಿಚಾರಣೆ, ಮತದಾರರ ನೋಂದಣಿ, ಮಾಹಿತಿ ತಂತ್ರಜ್ಞಾನದ ಬಳಕೆ, ದತ್ತಾಂಶ ಮತ್ತು ವಿದ್ಯುನ್ಮಾನ ಮತಯಂತ್ರಗಳ ನಿರ್ವಹಣೆ ಕುರಿತು ವಿಷಯಾಧಾರಿತ ಚರ್ಚೆಗಳನ್ನೂ ಸಮಾವೇಶದಲ್ಲಿ ನಡೆಸಲಾಯಿತು.
ಚುನಾವಣಾ ನಿರ್ವಹಣೆಯು ಕರ್ತವ್ಯ ಮತ್ತು ದೃಢಸಂಕಲ್ಪದಿಂದ ಕೂಡಿರುವ ಒಂದು ಪ್ರಯಾಣ ಎಂದು ರಾಜೀವ್ ಕುಮಾರ್ ಹೇಳಿದರು. ಮತದಾರರಿಗೆ ಉತ್ತಮ ಚುನಾವಣಾ ಅನುಭವ ನೀಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಆಯೋಗ ಮಾಡಿಕೊಳ್ಳುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
2024ರ ಲೋಕಸಭೆ ಚುನಾವಣೆಯ ಸಿದ್ಧತೆಯ ಭಾಗವಾಗಿ ಕಳೆದ ಆರು ತಿಂಗಳಿನಿಂದ ನಡೆಸುತ್ತಿರುವ ಹಲವಾರು ಸಭೆಗಳು, ಕಾರ್ಯಾಗಾರಗಳು, ವಿಚಾರಗೋಷ್ಠಿಗಳು, ತರಬೇತಿ ಕಾರ್ಯಕ್ರಮಗಳ ಪ್ರಮುಖ ಘಟ್ಟವೇ ಈ ಸಮಾವೇಶ ಎಂದು ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ಹೇಳಿದರು.
ಚುನಾವಣೆ ನಡೆಸುವ ನಿಟ್ಟಿನಲ್ಲಿ ಇರುವ ಸವಾಲುಗಳು ಮತ್ತು ಸಲಹೆಗಳನ್ನು ಆಯೋಗಕ್ಕೆ ನೀಡಲು ಚುನಾವಣಾ ಅಧಿಕಾರಿಗಳು ಮುಕ್ತರು ಎಂದು ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಹೇಳಿದರು. ಸಮಾವೇಶ ಎರಡು ದಿನಗಳವರೆಗೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.