ADVERTISEMENT

ದೇವಸ್ಥಾನ ಮಂಡಳಿ ವಿವಾದ: ಸಚಿವರ ನಿವಾಸಕ್ಕೆ ಚಾರ್‌ಧಾಮ ಅರ್ಚಕರ ಮುತ್ತಿಗೆ

ಪಿಟಿಐ
Published 23 ನವೆಂಬರ್ 2021, 14:21 IST
Last Updated 23 ನವೆಂಬರ್ 2021, 14:21 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಡೆಹ್ರಾಡೂನ್‌: ಚಾರ್‌ಧಾಮ ದೇವಸ್ಥಾನ ಮಂಡಳಿಯನ್ನು ವಿಸರ್ಜಿಸಬೇಕೆಂದು ಆಗ್ರಹಿಸಿ ಅರ್ಚಕರ ಗುಂಪೊಂದು ಉತ್ತರಾಖಂಡ ಕೃಷಿ ಸಚಿವ ಸುಬೋಧ್‌ ಉನಿಯಾಲ್‌ ಅವರ ನಿವಾಸಕ್ಕೆ ಮಂಗಳವಾರ ಮುತ್ತಿಗೆ ಹಾಕಿದೆ.

2019ರ ಉತ್ತರಾಖಂಡ ಚಾರ್‌ಧಾಮ್‌ ದೇವಸ್ಥಾನ ನಿರ್ವಹಣೆ ಕಾಯಿದೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಕಾರರು ಸಚಿವರ ನಿವಾಸದ ಎದುರು ಶೀರ್ಷಾಸನ ಹಾಕಿದ್ದಾರೆ.

ಪ್ರತಿಭಟನಕಾರರನ್ನು ಭೇಟಿಯಾದ ಸಚಿವ ಉನಿಯಾಲ್‌, ‘ನವೆಂಬರ್‌ 30ರವರೆಗೆ ಕಾಯಿರಿ, ಬಳಿಕ ದೇವಸ್ಥಾನ ಮಂಡಳಿ ಕುರಿತು ಪ್ರಮುಖ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

‘ದೇವಸ್ಥಾನ ಮಂಡಳಿಯು ನಮ್ಮ ಹಕ್ಕುಗಳನ್ನು ಕಸಿಯುತ್ತಿದೆ. ಅದನ್ನು ವಿಸರ್ಜಿಸಿ’ ಎಂದು ಕೇದಾರನಾಥ, ಬದರೀನಾಥ, ಗಂಗೋತ್ರಿ ಮತ್ತು ಯಮುನೋತ್ರಿಯ ಅರ್ಚಕರು ಆಗ್ರಹಿಸಿದ್ದಾರೆ.

ತ್ರಿವೇಂದ್ರ ಸಿಂಗ್‌ ರಾವತ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಮಂಡಳಿಯನ್ನು ಸ್ಥಾಪಿಸಿದ್ದು, ಉತ್ತರಾಖಂಡದ 51 ದೇಗುಲಗಳ ವ್ಯವಹಾರಗಳನ್ನು ಇದು ನೋಡಿಕೊಳ್ಳುತ್ತಿದೆ.

‘ಡಿಸೆಂಬರ್‌ 7ರಂದು ಆರಂಭವಾಗುವ ವಿಧಾನಸಭೆಯ ಅಧಿವೇಶನದ ವೇಳೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ’ ಎಂದೂ ಪ್ರತಿಭಟನಕಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.