ADVERTISEMENT

ಕೇದಾರನಾಥ ಯಾತ್ರೆ ಇಂದಿನಿಂದ ಆರಂಭ: ಡೋಲು ಬಾರಿಸಿ ಸಂಭ್ರಮಿಸಿದ ಯಾತ್ರಾರ್ಥಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಏಪ್ರಿಲ್ 2023, 2:49 IST
Last Updated 25 ಏಪ್ರಿಲ್ 2023, 2:49 IST
ಕೇದಾರನಾಥ ದೇವಾಲಯ
ಕೇದಾರನಾಥ ದೇವಾಲಯ   ಪಿಟಿಐ

ರುದ್ರಪ್ರಯಾಗ್: ಕೇದಾರನಾಥ ಯಾತ್ರೆ ಇಂದಿನಿಂದ (ಮಂಗಳವಾರ) ಆರಂಭವಾಗಿದ್ದು, ಈ ಬಾರಿ ದಿನವೊಂದಕ್ಕೆ 13 ಸಾವಿರ ಯಾತ್ರಿಕರ ಭೇಟಿಗಷ್ಟೇ ಅನುಮತಿ ನೀಡಲಾಗಿದೆ.

ಶ್ಲೋಕಗಳ ಪಠಣ, ವಾದ್ಯಗಳ ಗಾಯನದೊಂದಿಗೆ ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಾಯಿತು. ಯಾತ್ರಾರ್ಥಿಗಳು ಡೋಲು ಬಾರಿಸುತ್ತಾ ಸಂಭ್ರಮಿಸುತ್ತಿರುವ ವಿಡಿಯೊವನ್ನು ಸುದ್ದಿಸಂಸ್ಥೆ ‘ಎಎನ್‌ಐ’ ಹಂಚಿಕೊಂಡಿದೆ.

‘ಸರ್ಕಾರ ಈ ಬಾರಿ ಯಾತ್ರಾರ್ಥಿಗಳಿಗೆ ಟೋಕನ್‌ ವ್ಯವಸ್ಥೆಯನ್ನೂ ಪರಿಚಯಿಸಿದೆ. ಸುಗಮ ಯಾತ್ರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ರುದ್ರಪ್ರಯಾಗ್‌ ಜಿಲ್ಲಾಧಿಕಾರಿ ಮಯೂರ್‌ ದೀಕ್ಷಿತ್‌ ತಿಳಿಸಿದ್ದಾರೆ.

ADVERTISEMENT

ಯಾತ್ರಿಕರ ಆರೋಗ್ಯದ ಸುರಕ್ಷತೆಗೆ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಿದೆ. 22 ವೈದ್ಯರು ಸೇರಿದಂತೆ ಅಷ್ಟೇ ಸಂಖ್ಯೆಯ ಅರೆವೈದ್ಯಕೀಯ ಸಿಬ್ಬಂದಿಯನ್ನು ಯಾತ್ರಾ ಮಾರ್ಗದಲ್ಲಿ ನಿಯೋಜಿಸಲಾಗಿದೆ. 12 ವೈದ್ಯಕೀಯ ಶಿಬಿರ ತೆರೆಯಲಾಗಿದೆ. ಆರು ಆಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸಲಿವೆ. ತುರ್ತು ನೆರವಿಗಾಗಿ ಏರ್‌ ಆಂಬುಲೆನ್ಸ್‌ ಸೇವೆಗೂ ಸರ್ಕಾರ ಅನುಮತಿ ನೀಡಿದೆ ಎಂದು ವಿವರಿಸಿದ್ದಾರೆ.

ಸುಲಭ್‌ ಇಂಟರ್‌ನ್ಯಾಷನಲ್‌ ಯಾತ್ರಾ ಮಾರ್ಗದ ಸ್ವಚ್ಛತೆಯ ಹೊಣೆ ಹೊತ್ತಿದೆ. ಕೇದಾರನಾಥ ನಗರ ಪಂಚಾಯಿತಿಯಿಂದ ದೇಗುಲದ ಆವರಣ, ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತಾ ನಿರ್ವಹಣೆ ನಡೆಯಲಿದೆ. ಯಾತ್ರಾರ್ಥಿಗಳಿಗೆ ಅಗತ್ಯ ಕುಡಿಯುವ ನೀರು ಪೂರೈಕೆಗೂ ಕ್ರಮವಹಿಸಲಾಗಿದೆ ಎಂದಿದ್ದಾರೆ.

‘ಭದ್ರತೆಗಾಗಿ 450 ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶಾಖ ಅಶೋಕ್‌ ಬದಾನೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.